ರಾಷ್ಟ್ರೀಯ

ಅಯೋಧ್ಯೆ ವಿವಾದ: ಇಂದಿನಿಂದ ಸುಪ್ರೀಂ ವಿಚಾರಣೆ ಶುರು

Pinterest LinkedIn Tumblr

ಹೊಸದಿಲ್ಲಿ: ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರದಿಂದ ಆರಂಭಿಸುವ ಸಾಧ್ಯತೆಯಿದೆ.

ಬಾಬ್ರಿ ಮಸಿದಿ ಧ್ವಂಸ ಪ್ರಕರಣದ 25ನೇ ವಾರ್ಷಿಕೋತ್ಸವಕ್ಕೆ ಇನ್ನೇನು ಒಂದು ದಿನ ಬಾಕಿ ಇರುವಂತೆಯೇ ಈ ವಿಚಾರಣೆ ಆರಂಭವಾಗುತ್ತಿರುವುದು ಕಾಕತಾಳೀಯ.

ಮುಖ್ಯ ನ್ಯಾಯಮೂರ್ತಿ ದೀಪ್‌ ಮಿಶ್ರಾ, ನ್ಯಾ. ಅಶೋಕ್‌ ಭೂಷಣ್‌, ನ್ಯಾ. ಅಬ್ದುಲ್‌ ನಜೀರ್‌ ಅವರನ್ನು ಒಳಗೊಂಡ ವಿಶೇಷ ಪೀಠವು 2010ರ ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಒಟ್ಟು 13 ಮೇಲ್ಮನವಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಅಯೋಧ್ಯೆಯಲ್ಲಿರುವ ವಿವಾದಿತ 2.77 ಎಕರೆ ಪ್ರದೇಶವನ್ನು ಮೂವರು ಪಾರ್ಟಿಗಳಾದ ಸುನ್ನಿ ವಕ್ಫ್ ಬೋರ್ಡ್‌, ನಿರ್ಮೋಹಿ ಅಖಾಡ ಮತ್ತು ರಾಮ್‌ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿತ್ತು.

ಈ ಮಧ್ಯೆ, ವಿವಾದಿತ ಸ್ಥಳದಿಂದ ಕೊಂಚ ದೂರದಲ್ಲಿ, ಮುಸ್ಲಿಮರ ಜನಸಾಂದ್ರತೆ ಹೆಚ್ಚಾಗಿರುವ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡುವ ಮೂಲಕ ಈ ವಿವಾದಕ್ಕೆ ಅಂತ್ಯ ಹಾಡಬಹುದೆಂದು ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿಯ ನೇತೃತ್ವದಲ್ಲಿ ಕೆಲ ಮುಸ್ಲಿಮರು ನ್ಯಾಯಾಲಯಕ್ಕೆ ಸಲಹೆ ನೀಡಿದ್ದರು.

ಆದರೆ, ಈ ಪ್ರಕರಣದಲ್ಲಿ ಶಿಯಾ ಪಂಗಡದ ಮಧ್ಯ ಪ್ರವೇಶಕ್ಕೆ ಅಖಿಲ ಭಾರತ ಸುನ್ನಿ ವಕ್ಫ್ ಬೋರ್ಡ್‌ ವಿರೋಧ ವ್ಯಕ್ತಪಡಿಸಿತ್ತು.

1992ರ ಡಿ.6ರಂದು ಧ್ವಂಸಗೊಂಡ ಮಸೀದಿಯು ಸುನ್ನಿ ಪಂಗಡಕ್ಕೆ ಸೇರಿದ್ದೆಂದು 1946ರಲ್ಲೇ ತೀರ್ಮಾನವಾಗಿದೆ. ಹಾಗಾಗಿ ಇದರಲ್ಲಿ ಶಿಯಾಗಳು ಮಧ್ಯಪ್ರವೇಶ ಮಾಡಬಾರದೆಂದು ಸುನ್ನಿ ವಕ್ಫ್ ಮಂಡಳಿ ಸೂಚಿಸಿತ್ತು.

ಇತ್ತೀಚೆಗಷ್ಟೇ ಈ ಬಗ್ಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಕೆಲ ನಾಗರಿಕ ಹಕ್ಕುಗಳ ಹೋರಾಟಗಾರರು, ಅಯೋಧ್ಯೆ ವಿವಾದವನ್ನು ಕೇವಲ ಆಸ್ತಿ ವಿವಾದ ಎಂದು ಪರಿಗಣಿಸದೆ, ದೇಶದ ಜಾತ್ಯತೀತ ರಚನೆಯ ಮೇಲೆ ಸುದೀರ್ಘ ಪ್ರಭಾವ ಬೀರುವ ಗಂಭೀರ ವಿಚಾರವಾಗಿ ಪರಿಗಣಿಸಿ, ನ್ಯಾಯಾಲಯ ಮಧ್ಯ ಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಈ ಮುನ್ನ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರ ಸಂಬಂಧಪಟ್ಟ ದಾಖಲೆಗಳ ಇಂಗ್ಲಿಷ್‌ ಅನುವಾದ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ.

ಘಟಾನುಗಟಿ ವಕೀಲರು: ಪ್ರಮುಖ ವಕೀಲರಾದ ಕೆ ಪರಸರಣ್‌, ಸಿ ಎಸ್‌ ವೈದ್ಯನಾಥನ್‌ ಮತ್ತು ಸೌರಭ್‌ ಶಂಶೇರಿ ಅವರು ರಾಮ್‌ ಲಲ್ಲಾ ಪರವಾಗಿ ವಾದ ಮಂಡನೆ ಮಾಡಲಿದ್ದಾರೆ. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಉತ್ತರ ಪ್ರದೇಶ ಸರಕಾರವನ್ನು ಪ್ರತಿನಿಧಿಸಲಿದ್ದಾರೆ.

ಹಿರಿಯ ವಕೀಲರಾದ ಕಪಿಲ್‌ ಸಿಬಲ್‌, ಅನೂಪ್‌ ಜಾರ್ಜ್‌ ಚೌಧರಿ, ರಾಜೀವ್‌ ಧವನ್‌ ಮತ್ತು ಸುಶೀಲ್‌ ಜೈನ್‌ ಅವರು ಸುನ್ನಿ ವಕ್ಫ್ ಬೋರ್ಡ್‌ ಮತ್ತು ನಿರ್ಮೋಹಿ ಅಖಾರ ಸೇರಿದಂತೆ ಇತರ ಪಾರ್ಟಿಗಳ ಪರವಾಗಿ ವಾದಮಂಡನೆ ಮಾಡಲಿದ್ದಾರೆ.

Comments are closed.