ರಾಷ್ಟ್ರೀಯ

ಮತಯಂತ್ರಗಳ ಮೇಲೆ ಮತ್ತೆ ದೂಷಣೆ: ಅನುಮಾನಗಳು ನಿವಾರಣೆಯಾಗಲಿ

Pinterest LinkedIn Tumblr


ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ ವಿದ್ಯುನ್ಮಾನ ಮತಯಂತ್ರ ಮತ್ತೆ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಈ ಸಲವೂ ಬಹುಜನ ಸಮಾಜ ಪಾರ್ಟಿಯ ಮುಖ್ಯಸ್ಥೆ ಬಿಜೆಪಿ ಗೆಲುವಿಗೆ ಮತಯಂತ್ರಗಳನ್ನು ತಿರುಚಿದ್ದು ಕಾರಣ ಎಂದು ಆರೋಪಿಸುತ್ತಿರುವ ವಿಪಕ್ಷ ಗಢಣದ ಮುಂಚೂಣಿಯಲ್ಲಿದ್ದಾರೆ. ಸಮಾಜವಾದಿ ಪಾರ್ಟಿ, ಕಾಂಗ್ರೆಸ್‌, ಸಮಾಜವಾದಿ ಪಾರ್ಟಿ ಮತ್ತಿತರ ಪಕ್ಷಗಳು ಅವರನ್ನು ಬೆಂಬಲಿಸುತ್ತಿವೆ. ಫ‌ಲಿತಾಂಶ ಪ್ರಕಟವಾದ ಕ್ಷಣದಲ್ಲಿಯೇ ಮತಯಂತ್ರಗಳನ್ನು ತಿರುಚಿ ಎಲ್ಲ ಮತಗಳು ತನಗೆ ಬೀಳುವಂತೆ ಮಾಡಿ ಬಿಜೆಪಿ ಗೆದ್ದಿದೆ ಎಂದು ಯಾವುದೇ ಪರಿಶೀಲನೆಯೂ ನಡೆಸದೆ ಮಾಯಾವತಿ ಆರೋಪಿಸಿದ್ದಾರೆ. ಉಳಿದವರೂ ಈ ಆರೋಪಕ್ಕೆ ತಮ್ಮ ಧ್ವನಿಯನ್ನು ಸೇರಿಸಿ ಮತಯಂತ್ರಗಳ ವಿಶ್ವಾಸಾರ್ಹತೆಯನ್ನೇ ಅನುಮಾನದಿಂದ ನೋಡುವಂತೆ ಮಾಡುತ್ತಿದ್ದಾರೆ. ಮಾಯಾವತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತಪತ್ರಗಳ ಮೂಲಕ ಚುನಾವಣೆ ನಡೆಸಿ ನೋಡಿ ಎಂಬ ಸವಾಲನ್ನೂ ಹಾಕಿದ್ದಾರೆ. ಉತ್ತರ ಪ್ರದೇಶದ ಸ್ಥಳೀಯಾಡಳಿತ ಚುನಾವಣೆಯಲ್ಲಿ ನಗರಪಾಲಿಕೆಗಳ ಮತದಾನಕ್ಕೆ ಮಾತ್ರ ಮತಯಂತ್ರಗಳನ್ನು ಬಳಸಿಕೊಳ್ಳಲಾಗಿದೆ. ನಗರಸಭೆ ಮತ್ತು ನಗರ ಪಂಚಾಯತ್‌ಗಳಲ್ಲಿ ಮತಪತ್ರಗಳ ಮೂಲಕ ಮತದಾನ ನಡೆದಿದೆ. 16 ನಗರಪಾಲಿಕೆಗಳ ಪೈಕಿ 14ರಲ್ಲಿ ಬಿಜೆಪಿ ಗೆದ್ದಿದೆ. ನಗರಸಭೆ ಮತ್ತು ನಗರ ಪಂಚಾಯತು ಚುನಾವಣೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.ಬಿಜೆಪಿ ನಗರಪಾಲಿಕೆಗಳಲ್ಲಿ ಶೇ. 18 ಮತ್ತು ನಗರಸಭೆಗಳಲ್ಲಿ ಶೇ. 12 ಮತಗಳನ್ನು ಪಡೆದುಕೊಂಡಿದೆ. ಮಾಯಾವತಿ ಹಾಗೂ ಇತರರ ಆರೋಪಕ್ಕೆ ಬಲತಂದಿರುವುದೇ ಈ ಮತಗಳಿಕೆ ಪ್ರಮಾಣ. ಫ‌ಲಿತಾಂಶದಲ್ಲಾಗಿರುವ ಈ ಭಾರೀ ವ್ಯತ್ಯಾಸ ಪರಿಶೀಲನಾ ಯೋಗ್ಯವೇ ಆಗಿದ್ದರೂ ಅದಕ್ಕೆ ಮತಯಂತ್ರವನ್ನು ಮಾತ್ರ ದೂರುವುದು ಸಾಧುವಲ್ಲ.

ಕಳೆದ ಮಾರ್ಚ್‌ನಲ್ಲಿ ಉತ್ತರ ಪ್ರದೇಶವೂ ಸೇರಿದಂತೆ ಐದು ರಾಜ್ಯಗಳಿಗೆ ನಡೆದ ವಿಧಾನಸಭೆ ಫ‌ಲಿತಾಂಶದ ಸಂದರ್ಭದಲ್ಲೂ ವಿಪಕ್ಷಗಳು ಮತಯಂತ್ರದ ಮೇಲೆ ಇದೇ ಮಾದಿರಯ ಆರೋಪವನ್ನು ಮಾಡಿದ್ದವು. ವಿಪಕ್ಷಗಳ ಪ್ರತಿಭಟನೆ ತಾರಕಕ್ಕೇರಿದಾಗ ಚುನಾವಣಾ ಆಯೋಗ ಮತಯಂತ್ರವನ್ನು ತಿರುಚುವ ಬಹಿರಂಗ ಪ್ರದರ್ಶನ ಏರ್ಪಡಿಸಿ ಇದಕ್ಕೆ ಎಲ್ಲ ಪಕ್ಷವನ್ನು ಆಹ್ವಾನಿಸಿತು. ಯಾವುದೇ ಪಕ್ಷ ಮತಯಂತ್ರವನ್ನು ತಿರುಚಿ ತೋರಿಸಿದರೆ ಆರೋಪವನ್ನು ಒಪ್ಪಿಕೊಳ್ಳುತ್ತೇನೆ ಎಂದು ಆಯೋಗ ಸವಾಲು ಕೂಡ ಹಾಕಿತು. ಆದರೆ ಈ ಸವಾಲು ಸ್ವೀಕರಿಸಿದ್ದು ಕಮ್ಯುನಿಸ್ಟ್‌ ಸೇರಿ ಎರಡು ಪಕ್ಷಗಳು ಮಾತ್ರ. ಈ ಪಕ್ಷಗಳೂ ಮತಯಂತ್ರ ತಿರುಚುವ ಯಾವ ಪ್ರಯತ್ನವನ್ನೂ ಮಾಡದೆ ಆಯೋಗ ತೋರಿಸಿದ ಪ್ರಾತ್ಯಕ್ಷಿಕೆಗೆ ತೃಪ್ತಿ ವ್ಯಕ್ತಪಡಿಸಿದ್ದವು. ಆಗ ದೊಡ್ಡ ದೊಡ್ಡ ಆರೋಪಗಳನ್ನು ಮಾಡಿದ ಬಿಎಸ್‌ಪಿಯಾಗಲಿ, ಕಾಂಗ್ರೆಸ್‌ ಆಗಲಿ ಅಥವಾ ಎಸ್‌ಪಿಯಾಗಲಿ ಸವಾಲನ್ನು ಸ್ವೀಕರಿಸದೆ ಪಲಾಯನ ಮಾಡಿ ಈಗ ಮತ್ತೆ ಅದೇ ಆರೋಪವನ್ನು ಮಾಡುತ್ತಿರುವುದು ಈ ಪಕ್ಷಗಳ ಹೊಣೆಗೇಡಿತನವನ್ನು ತೋರಿಸುತ್ತದೆ.

ಮತಯಂತ್ರ ವ್ಯವಸ್ಥೆ ಬಂದ ಬಳಿಕ ಚುನಾವಣೆಗಳು ಹೆಚ್ಚು ಪಾರದರ್ಶಕವೂ, ಕ್ಷಿಪ್ರವೂ ಆಗಿರುವುದು ಅನುಭವಕ್ಕೆ ಬರುತ್ತಿದೆ. ಮುಖ್ಯವಾಗಿ ಅಸಿಂಧುವಾಗುವ ಮತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹಿಂದಿನ ಮತಪತ್ರಗಳ ಕಾಲದಲ್ಲಿ ಗೆಲುವಿನ ಅಂತರಕ್ಕಿಂತಲೂ ಹೆಚ್ಚು ಮತಗಳು ಅಸಿಂಧುಗೊಂಡಿರುವ ಅನೇಕ ನಿದರ್ಶನಗಳಿವೆ. ಸಾಗಾಟ ಸುಲಭ, ಮತ ಎಣಿಕೆ ತ್ವರಿತವಾಗುತ್ತದೆ, ಖರ್ಚುವೆಚ್ಚಗಳು ಕಡಿಮೆ ಎಂಬಂತಹ ಹಲವು ಧನಾತ್ಮಕ ಅಂಶಗಳು ಮತಯಂತ್ರದಲ್ಲಿವೆ. 2000ನೇ ಇಸವಿಯಿಂದೀಚೆಗೆ ಮತಯಂತ್ರಗಳು ಹಲವು ನ್ಯಾಯಾಲಯಗಳ ಮತ್ತು ಪ್ರಯೋಗಗಳ ಅಗ್ನಿಪರೀಕ್ಷೆಯನ್ನು ದಾಟಿ ಬಂದು ತಿರುಚಲು ಅಸಾಧ್ಯ ಎಂದು ಸಾಬೀತಾಗಿವೆ. ಹಲವು ರಾಜ್ಯಗಳ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ಕೂಡ ಮತಯಂತ್ರ ಅತ್ಯಂತ ಪ್ರಯೋಜನಕಾರಿಯಾದ ಆವಿಷ್ಕಾರ ಎಂದು ಮನಗಂಡಿವೆ. ಅದರಲ್ಲೂ ಬೇರೆ ದೇಶಗಳ ಮತಯಂತ್ರಗಳಲ್ಲಿ ಇಲ್ಲದ ಅನೇಕ ಸುರಕ್ಷಾ ಅಂಶಗಳು ನಮ್ಮ ಮತಯಂತ್ರಗಳಲ್ಲಿವೆ. ಹೀಗಾಗಿ ಅಮೆರಿಕ ಸೇರಿ ಹಲವು ದೇಶಗಳಲ್ಲಿ ಮತಯಂತ್ರಗಳ ಬಳಕೆ ಇಲ್ಲ ಎನ್ನುವ ಸಮರ್ಥನೆಗೆ ಅರ್ಥವಿಲ್ಲ.

ಪ್ರಜಾತಂತ್ರಕ್ಕೆ ಮೂಲಾಧಾರವಾಗಿರುವ ಚುನಾವಣೆ ಪ್ರಕ್ರಿಯೆ ವಿಶ್ವಾಸಾರ್ಹವಾಗಿ ನಡೆಯಬೇಕಿ ರುವುದರಿಂದ ಮತಯಂತ್ರದ ಮೇಲಿನ ಅನುಮಾನಗಳು ನಿವಾರಣೆಯಾಗಲೇಬೇಕು.ಯಾರಿಗೆ ಮತ ಬಿದ್ದಿದೆ ಎಂದು ತಿಳಿಸುವ ರಸೀದಿ ಕೊಡುವ ವಿವಿಪ್ಯಾಟ್‌ ಸೌಲಭ್ಯವನ್ನು ಪ್ರತಿ ಮತಯಂತ್ರಕ್ಕೂ ಅಳವಡಿಸುವ ಮೂಲಕ ಚುನಾವಣಾ ಆಯೋಗ ಇಂತಹ ಆರೋಪಗಳಿಗೆ ಅವಕಾಶವಿಲ್ಲದಂತೆ ಮಾಡಬೇಕು. ಅಂತೆಯೇ ಮತಯಂತ್ರಗಳನ್ನು ಇನ್ನಷ್ಟು ಸುಧಾರಿಸುವ ಅಗತ್ಯವೂ ಇದೆ.

-ಉದಯವಾಣಿ

Comments are closed.