ರಾಷ್ಟ್ರೀಯ

ಮಹಾರಾಷ್ಟ್ರಕ್ಕೆ ಹೋಗಬೇಕಾದ ರೈಲು ಮಧ್ಯಪ್ರದೇಶ ತಲುಪಿತು!

Pinterest LinkedIn Tumblr


ಹೊಸದಿಲ್ಲಿ: ದಾರಿ ತಪ್ಪಿದ ರೈಲಿನ ಕಥೆ ಇದು. ಮಹಾರಾಷ್ಟ್ರಕ್ಕೆ ಹೊರಡಬೇಕಾಗಿದ್ದ ರೈಲೊಂದು ದಾರಿ ತಪ್ಪಿ ಮಧ್ಯಪ್ರದೇಶ ತಲುಪಿದೆ. ಇದರಿಂದಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ 1500 ಮಂದಿ ರೈತರಿಗೆ ಏನು ಮಾಡಬೇಕೋ ದಿಕ್ಕು ತೋಚದಂತಾಗಿದೆ.

ಇಷ್ಟಕ್ಕೂ ನಡೆದದ್ದೇನೆಂದರೆ, ದೇಶದ ವಿವಿಧ ಭಾಗಗಳಿಂದ ರೈತರು ಸೋಮವಾರ (ನ.20) ದಿಲ್ಲಿಗೆ ಆಗಮಿಸಿ ಜಂತರ್‌ಮಂತರ್ ಬಳಿ ಆಯೋಜಿಸಿದ್ದ ‘ಕಿಸಾನ್ ಮುಕ್ತಿ ಸಂಸತ್’ ಯಾತ್ರೆಯಲ್ಲಿ ಪಾಲ್ಗೊಂಡು ಪ್ರತಿಭಟಿಸಿದ್ದರು. ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಹಾರಾಷ್ಟ್ರದಿಂದ 1500 ಮಂದಿ ರೈತರು ವಿಶೇಷ ರೈಲಿನಲ್ಲಿ (ಸ್ವಾಭಿಮಾನಿ ಎಕ್ಸ್‌ಪ್ರೆಸ್) ಆಗಮಿಸಿದ್ದರು.

ಪ್ರತಿಭಟನೆ ಮುಗಿಸಿದ ಬಳಿಕ ತಿರುಗಿ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ರೈಲು ದಾರಿ ತಪ್ಪಿದೆ. ಹೊಸದಿಲ್ಲಿಯಲ್ಲಿ ಬೆಳಗ್ಗೆ 10ಕ್ಕೆ ಬಿಟ್ಟ ರೈಲು ರಾತ್ರಿ 2 ಗಂಟೆಗೆ ಮಥುರಾ ನಿಲ್ದಾಣಕ್ಕೆ ಬಂದು ತಲುಪಿದೆ. ಅಲ್ಲಿಂದ 160 ಕಿ.ಮೀ ಬೇರೆ ಮಾರ್ಗದಲ್ಲಿ ಪ್ರಯಾಣಿಸಿ ಮಧ್ಯಪ್ರದೇಶದ ಬಾನ್ಮೋರ್ ನಿಲ್ದಾಣ ತಲುಪಿದೆ.

ಮಥುರಾ ರೈಲು ನಿಲ್ದಾಣದಲ್ಲಿ ಅಧಿಕಾರಿಗಳು ತಪ್ಪು ಸಿಗ್ನಲ್ ಕೊಟ್ಟಿದ್ದೇ ಇದಕ್ಕೆ ಕಾರಣ ಎನ್ನುತ್ತವೆ ಮೂಲಗಳು. ಈ ಘಟನೆ ಬಗ್ಗೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಊರು ಹೆಸರು ಗೊತ್ತಿಲ್ಲದ ಜಾಗದಲ್ಲಿ ಈ ರೀತಿ ಸಿಕ್ಕಿಬಿದ್ದೇವೆಂದು, ಇಷ್ಟೆಲ್ಲಾ ನಡೆದರೂ ಯಾವುದೇ ರೈಲ್ವೆ ಅಧಿಕಾರಿ ಸಹ ಇಲ್ಲಿಗೆ ಬಂದಿಲ್ಲ ಎಂದು ರೈತರು ತಮ್ಮ ದುಃಖ ತೋಡಿಕೊಂಡಿದ್ದಾರೆ.

Comments are closed.