
ಅಹ್ಮದಾಬಾದ್: ಗುಜರಾತಿನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಡಳಿತ ಹಾಗೂ ಪ್ರತಿಪಕ್ಷಗಳ ಕೆಸರೆರಚಾಟ ಹೆಚ್ಚುತ್ತಿದೆ. ಜತೆಗೆ ಪಾತೀದಾರ್ ಸಮುದಾಯಕ್ಕೆ ಮೀಸಲಾತಿ ಬೇಕೆಂದು ಆರಂಭಿಸಿದ ಹೋರಾಟದಿಂದ ರಾಜಕೀಯಕ್ಕೆ ಧುಮುಕಿದ, ಹಾರ್ದಿಕ್ ಪಟೇಲ್ ಅವರ ಸೆಕ್ಸ್ ಸಿಡಿ ಬಿಡುಗಡೆಯಾಗಿದ್ದು, ಇದು ರಾಜ್ಯದ ಚುನಾವಣಾ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.
ರಾಸಲೀಲೆ ಸಿಡಿ ಬಿಡುಗಡೆ ಮಾಡಿರುವ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಪಟೇಲ್, 70ರ ದಶಕದ ಪ್ರಸಿದ್ಧ ‘ಗೋಪಿ’ ಚಿತ್ರದ ‘ರಾಮಚಂದ್ರ ಕಹಾ ಗಯೇ ಸಿಯಾ ಸೇ…’ ಎಂಬ ಹಾಡಿನ ಸಾಹಿತ್ಯವನ್ನು ತಿರುಚುವ ಮೂಲಕ ಮೋದಿಯನ್ನು ಟೀಕಿಸಿದ್ದಾರೆ.
‘ಕಲಿಯುಗದ ಅಂತ್ಯ ಸಮೀಪಿಸುತ್ತಿದ್ದು, ಇದಕ್ಕೆ ಪ್ರಧಾನಿ ಮೋದಿಯೇ ಕಾರಣ,’ ಎಂದು ಆರೋಪಿಸಿರುವ ಪಟೇಲ್, ಈ ತಿರುಚಿದ ಸಾಹಿತ್ಯದಲ್ಲಿ ಮೋದಿಯವರ ಪತ್ನಿ ಯಶೋದಾಬೇನ್ ಅವರನ್ನೂ ಉಲ್ಲೇಖಿಸಿದ್ದಾರೆ, ಮಹಾತ್ಮ ಗಾಂಧಿಯವನ್ನು ಕೊಂದ ಗೂಡ್ಸೆ ದೇಗುಲ ಕಟ್ಟುತ್ತಿರುವುದನ್ನೂ ಹಾಡಿನಲ್ಲಿ ಸೇರಿಸಿದ, ಪಟೇಲ್, ಇವೆಲ್ಲವೂ ಕಲಿಯುಗ ಅಂತ್ಯಗೊಳ್ಳುತ್ತಿರುವುದಕ್ಕೆ ಸಾಕ್ಷಿ ಎಂದಿದ್ದಾರೆ.
’22 ವರ್ಷದಲ್ಲಿ ಬಿಜೆಪಿ ಏನು ಸಾಧಿಸಿದೆ ಎನ್ನುವ ಬಗ್ಗೆ ಜನರಿಗೆ ಕುತೂಹಲವಿದೆಯೇ ಹೊರತು, 22 ವರ್ಷದ ಯುವಕ (ಪಟೇಲ್ಗೆ 24 ವರ್ಷ ವಯಸ್ಸು) ಏನು ಮಾಡುತ್ತಾನೆ ಎಂಬ ಬಗ್ಗೆ ಆಸಕ್ತರಾಗಿಲ್ಲ,’ ಎಂದು ಹೇಳಿದ್ದಾರೆ.
ಬಿಜೆಪಿ ಬಿಡುಗಡೆ ಮಾಡಿದ ರಾಸಲೀಲೆ ಸಿಡಿ ವಿರುದ್ಧ ವಕೀಲರನ್ನು ಸಂಪರ್ಕಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಟೇಲ್ ಹೇಳಿದ್ದಾರೆ.
Comments are closed.