ಹೊಸದಿಲ್ಲಿ: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಜೆಎನ್ಯುಗೂ, ವಿವಾದಕ್ಕೆ ಬಿಡಿಸಲಾರದ ನಂಟು ಎನಿಸುತ್ತದೆ. ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುವ ಈ ವಿವಿ ಇದೀಗ ಗೋಮಾಂಸ ಭಕ್ಷಣೆಗೆ ಸಂಬಂಧಿಸಿದಂತೆ ಮತ್ತೆ ವಿವಾದ ಎಬ್ಬಿಸುತ್ತಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು)ದ ಆಡಳಿತಾತ್ಮಕ ಕಚೇರಿ ಬಳಿ ಬೀಫ್ ಬಿರಿಯಾನಿ ತಯಾರಿಸಿ, ತಿನ್ನುತ್ತಿದ್ದ ನಾಲ್ವರು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ದಂಡ ವಿಧಿಸಿರುವುದು ವಿವಾದಕ್ಕೆ ಕಾರಣವಾಗಿದೆ.
‘ವಿವಿ ಆವರಣದಲ್ಲಿಯೇ ಗೋಮಾಸಂ ಭಕ್ಷಿಸಿದ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿ, ವಿವಿ ದಂಡ ವಿಧಿಸಿ, ತಪ್ಪೆಸಿಗಿದ ವಿದ್ಯಾರ್ಥಿಗಳಿಗೆ ನೀಡಿರುವ ನೋಟಿಸ್ನಲ್ಲಿ ಗೋಮಾಂಸ ಸೇವನೆ ಬಗ್ಗೆ ಉಲ್ಲೇಖವಿಲ್ಲ,’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ.
ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಾದ ಚೇಪಾಲ್ ಶೆರ್ಪಾ, ಅಮೀರ್ ಮಲೀಕ್ ಮತ್ತು ಮನೀಶ್ ಕುಮಾರ್ಗೆ ತಲಾ 6 ಸಾವಿರ ರೂಪಾಯಿ ದಂಡ ವಿದಿಸಿದ್ದರೆ, ಜೆಎನ್ಯುದ ಸ್ಟೂಡೆಂಟ್ ಯುನಿಯನ್ನ ಮಾಜಿ ಪ್ರಧಾನ ಕಾರ್ಯದರ್ಶಿ ಸತಾರೂಪ್ ಚಕ್ರವರ್ತಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ವಿದ್ಯಾರ್ಥಿಗಳಿಗೆ ದಂಡದ ಮೊತ್ತವನ್ನು ಪಾವತಿಸಲು 10 ದಿನಗಳ ಕಾಲಾವಕಾಶ ನೀಡಿದ್ದು, ತಪ್ಪಿದ್ದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಆಡಳಿತ ಮಂಡಳಿ ಎಚ್ಚರಿಸಿದೆ.
Comments are closed.