ನವದೆಹಲಿ: ಪಟಾಕಿ ಮೇಲೆ ನಿಷೇಧ ಹೇರಿದ್ದ ಸುಪ್ರೀಂಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದಿರುವ ದೆಹಲಿ ಬಿಜೆಪಿ ನಾಯಕರೊಬ್ಬರು ಮಕ್ಕಳಿಗೆ ಪಟಾಕಿ ಹಂಚಿರುವ ಘಟನೆ ನಡೆದಿದೆ.
ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಮುಂಬರುವ ನವೆಂಬರ್ 1ರ ತನಕ ಪಟಾಕಿ ಸಿಡಿಸುವುದಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿತ್ತು. ಇದೇ ಅಕ್ಟೋಬರ್ ದೀಪಾವಳಿ ಹಬ್ಬದ ತಿಂಗಳಾದ್ದರಿಂದ ಪಟಾಕಿ ಮಾರಾಟ ಮತ್ತು ಪಟಾಕಿ ಬಳಕೆ ಹೆಚ್ಚು ಮಾಡುವುದರಿಂದ ದೆಹಲಿಯಲ್ಲಿ ವಾಯುಮಾಲೀನ್ಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸುಪ್ರೀಂ ಕೋರ್ಟ್ ಪಟಾಕಿ ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಿತ್ತು. ಸುಪ್ರೀಂಕೋರ್ಟ್ ಆದೇಶಕ್ಕೆ ಇದೀಗ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.
ಸುಪ್ರೀಂಕೋರ್ಟ್ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಬಗ್ಗ ಅವರು, ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರ ಹರಿನಗರ ಪ್ರದೇಶದಲ್ಲಿ ಮಕ್ಕಳಿಗೆ ಪಟಾಕಿಗಳನ್ನು ಹಂಚಿ, ಪಟಾಕಿ ಹಂಚುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಾಕಿದ್ದಾರೆ.
ಪಟಾಕಿ ಮಾರಾಟದ ಮೇಲೆ ಸುಪ್ರೀಂಕೋರ್ಟ್ ನಿಷೇಧ ಹೇರಿದೆ. ನಾನು ಪಟಾಕಿಗಳನ್ನಷ್ಟೇ ಮಕ್ಕಳಿಗೆ ಹಂಚುತ್ತಿದ್ದೇನೆ. ನಿರ್ದಿಷ್ಟ ವಿಭಾಗವನ್ನು ಆಯ್ದುಕೊಂಡು ಪಟಾಕಿಗಳ ಮೇಲೆ ನಿಷೇಧ ಹೇರುವುದು ತಪ್ಪು, ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ನವೆಂಬರ್ 1 ರವರೆಗೂ ಪಟಾಕಿಗಳ ಮೇಲೆ ನಿಷೇಧ ಹೇರಲಾಗಿದೆ. ನವೆಂಬರ್ ಬಳಿಕ ಕೂಡ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಹೊಸ ವರ್ಷದ ದಿನದಂದೂ ಕೂಡ ಪಟಾಕಿಗಳನ್ನು ಹಚ್ಚಲಾಗುತ್ತದೆ ಎಂದು ತಜೀಂದರ್ ಬಗ್ಗ ಅವರು ಹೇಳಿದ್ದಾರೆ.
Comments are closed.