ದೆಹಲಿ: ತಪ್ಪಾಗಿ ಬೇರೊಂದು ರೈಲು ಹತ್ತಿ ದೆಹಲಿಗೆ ಬಂದಿಳಿದ ಛತ್ತೀಸ್ಗಢದ ಬಾಲಕಿಯೊಬ್ಬಳನ್ನು ಅಪಹರಿಸಿ, ಅತ್ಯಾಚಾರಗೈದು ಮಾರಾಟ ಮಾಡಿದ ಘಟನೆ ವರದಿಯಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಸಂಬಂಧಿಕರ ಮನೆಗೆ ಹೊರಟಿದ್ದ ಛತ್ತೀಸ್ಗಢ್ನ ಬಾಲಕಿ ತಪ್ಪಾಗಿ ರೈಲು ಹತ್ತಿ ದೆಹಲಿಗೆ ಬಂದಿಳಿದಿದ್ದಳು.
ರೈಲ್ವೆ ನಿಲ್ದಾಣದಲ್ಲಿ ಬಾಟಲಿ ನೀರು ಮಾರುತ್ತಿದ್ದ ಅರ್ಮಾನ್ ಎಂಬಾತ ತಾನು ಹಿರಿಯ ಪೊಲೀಸ್ ಅಧಿಕಾರಿ ಎಂದು ಹೇಳಿ ಆ ಹುಡುಗಿಯವನ್ನು ಸರೈ ಕಲೇ ಖಾನ್ ಎಂಬಲ್ಲಿಗೆ ಕರೆತಂದಿದ್ದನು. ಅಲ್ಲಿ ಆತ ತನ್ನ ಪತ್ನಿ ಹಸೀನಾ ಎಂಬಾಕೆಯ ಸಹಾಯದಿಂದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದನು.
ಆನಂತರ ಅರ್ಮಾನ್ -ಹಸೀನಾ ದಂಪತಿ ಈ ಬಾಲಕಿಯನ್ನು ಪಪ್ಪು ಯಾದವ್ ಎಂಬಾತನಿಗೆ 70,000ಕ್ಕೆ ಮಾರಾಟ ಮಾಡಿದ್ದರು!
ಎರಡು ತಿಂಗಳುಗಳ ಕಾಲ ಈ ಬಾಲಕಿ ಪಪ್ಪು ಯಾದವ್ ಮನೆಯಲ್ಲಿ ವಾಸವಾಗಿದ್ದಳು. ಪಪ್ಪು ಈಕೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಬಾಲಕಿ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ ತಲುಪಿದ್ದಳು. ಅಲ್ಲಿ ಬಾಲಕಿಯನ್ನು ಪತ್ತೆ ಹಚ್ಚಿದ ಹಸೀನಾ, ಬಾಲಕಿಗೆ ಅಮಲು ಪದಾರ್ಥ ಬೆರೆಸಿದ ಪಾನೀಯ ನೀಡಿದ್ದಳು.
ಅದು ಸೇವಿಸಿದ ಕೂಡಲೇ ಪ್ರಜ್ಞೆ ತಪ್ಪಿದ ಬಾಲಕಿಯನ್ನು ಮಹಮ್ಮದ್ ಅಫ್ರೋಜ್ ಎಂಬಾತನಿಗೆ ಹಸೀನಾ ಒಪ್ಪಿಸಿದ್ದಳು.
ಅಫ್ರೋಜ್ ರೈಲ್ವೆ ನಿಲ್ದಾಣದ ಬಳಿಯಲ್ಲೇ ಬಾಲಕಿಯನ್ನು ಅತ್ಯಾಚಾರವೆಸಗಿ, ಹಸೀನಾಗೆ ಒಂದಷ್ಟು ಮೊತ್ತ ಪಾವತಿ ಮಾಡಿದ್ದನು. ಅಲ್ಲಿಂದಲೂ ತಪ್ಪಿಸಿಕೊಂಡು ಓಡಿ ಬಂದ ಬಾಲಕಿಯನ್ನು ಗಮನಿಸಿದ ಯಾರೋ ಪ್ರಯಾಣಿಕರು ಪಿಸಿಆರ್ ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ.
ಬಾಲಕಿಯನ್ನು ರಕ್ಷಿಸಿದ ಪೊಲೀಸರು ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 263 (ಅಪಹರಣ), 366 (ಅಪಹರಣ, ಮದುವೆಗೆ ಒತ್ತಾಯ ಮಾಡುವುದು), 376 (ಅತ್ಯಾಚಾರವೆಸಗಿದ್ದಕ್ಕೆ ಶಿಕ್ಷೆ), 328, 526 ಸೆಕ್ಷನ್ ಅಡಿಯಲ್ಲಿ ಕೇಸು ದಾಖಸಿದ್ದಾರೆ.
Comments are closed.