ಆಗ್ನೇಯ ದೆಹಲಿಯ ಅಮರ್ ಕಾಲೋನಿ ಪ್ರದೇಶದಲ್ಲಿ ಚಲಿಸುತ್ತಿರುವ ಕಾರಿನಲ್ಲಿಯೇ ಮೂವರು ಆರೋಪಿಗಳು 21 ವರ್ಷದ ಯುವತಿಯ ಮೇಲೆ ಗ್ಯಾಂಗ್ರೇಪ್ ಎಸಗಿದ ಘಟನೆ ವರದಿಯಾಗಿದೆ.
ನಿನ್ನೆ ರಾತ್ರಿ ಆರೋಪಿಗಳಾದ ಆರಿಫ್(23) ಮೆಹರ್ಬಾನ್(24) ಮತ್ತು ವಿಜಯ್ ಎನ್ನುವ ಕಾಮುಕರು, ಜಾರ್ಖಂಡ್ ಮೂಲದ ಯುವತಿಯ ಮೇಲೆ ಗ್ಯಾಂಗ್ರೇಪ್ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಯುವತಿ ಉದ್ಯೋಗವನ್ನು ಹುಡುಕಲು ಆರು ತಿಂಗಳುಗಳ ಹಿಂದೆ ದೆಹಲಿಗೆ ಬಂದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲ ವಾರಗಳ ಹಿಂದೆ ಯುವತಿ ಆರಿಫ್ ಎಂಬಾತನನ್ನು ಭೇಟಿ ಮಾಡಿದಾಗ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ಮಾರನೇ ದಿನ ಸಂದರ್ಶನವಿದೆ ಎನ್ನುವ ನೆಪವೊಡ್ಡಿ ಯುವತಿಯನ್ನು ಕರೆಸಿಕೊಂಡಿದ್ದ ಎನ್ನಲಾಗಿದೆ.
ಯುವತಿಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಆರೋಪಿಗಳು ಜನತಾ ಕ್ಯಾಂಪ್ನ ಝುಗ್ಗಿ ಪ್ರದೇಶದಲ್ಲಿ ಅತ್ಯಾಚಾರವೆಸಗಿ ನಂತರ ರಸ್ತೆಯ ಮೇಲೆ ಎಸೆದು ಪರಾರಿಯಾಗಿದ್ದರು.
ಘಟನೆಯ ಪ್ರಮುಖ ಆರೋಪಿ ಆರಿಫ್ ಕಾರು ಚಾಲಕನಾಗಿದ್ದರೆ, ಮತ್ತೊಬ್ಬ ಆರೋಪಿ ಮೆಹರ್ಬಾನ್ ಪಾರ್ಕ್ ಅಟೆಂಡೆಂಟ್ ಆಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.