ಕೊಟ್ಟಾಯಂ (ಕೇರಳ): ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ಮಾಡಿದ ಕಾರಣ ಕಿರಿಯ ವಿದ್ಯಾರ್ಥಿಯ ಮೂತ್ರಪಿಂಡಗಳಿಗೆ (ಕಿಡ್ನಿ) ಹಾನಿಯಾಗಿರುವ ಘಟನೆ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ನಡೆದಿದೆ.
ಈ ಸಂಬಂಧ, ಕಾಲೇಜಿನ ಅಂತಿಮ ವರ್ಷದ ಡಿಪ್ಲೊಮಾದ ಎಂಟು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ಐವರು ಭಾನುವಾರ ಸಂಜೆ ಪೊಲೀಸರಿಗೆ ಶರಣಾಗಿದ್ದಾರೆ.
ಡಿಸೆಂಬರ್2ರಂದು ಘಟನೆ ನಡೆದಿದೆ. ಪ್ರಥಮ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತ ವಿದ್ಯಾರ್ಥಿ ಅವಿನಾಶ್ತ್ರಿಶೂರ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಮೂರು ಬಾರಿ ಡಯಾಲಿಸಿಸ್ಗೆ ಒಳಗಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಅಂದು ರಾತ್ರಿ ಹಿರಿಯ ವಿದ್ಯಾರ್ಥಿಗಳು ನನ್ನನ್ನು ಹೊರಗೆ ಕರೆದರು. ನಂತರ ಸಂಪೂರ್ಣ ಬೆತ್ತಲಾಗಿಸಿದರು. ಜತೆಗೆ ಬಲವಂತದಿಂದ ಮದ್ಯ ಕುಡಿಸಿದರು, ಅದರಲ್ಲಿ ಯಾವುದೋ ಪುಡಿ ಬೆರೆಸಿದ್ದರು. ಇಷ್ಟೆಲ್ಲಾ ಮುಗಿದ ಮೇಲೆ ಬೆಳಗಿನ ಜಾವ ಐದರವರೆಗೂ ವಿವಿಧ ವ್ಯಾಯಾಮಗಳನ್ನು ಮಾಡಿಸಿದರು. ತಲೆಸುತ್ತಿ ಬಿದ್ದರೂ ಬಿಡಲಿಲ್ಲ’ ಎಂದು ಅವಿನಾಶ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾನೆ.
ವಿಪರೀತ ವ್ಯಾಯಾಮ ಮಾಡಿಸಿದ್ದರಿಂದಲೇ ಕೆಲವು ಹಾರ್ಮೋನ್ಮತ್ತು ಪ್ರೋಟಿನ್ಗಳು ಹೆಚ್ಚು ಉತ್ಪತಿಯಾಗಿ, ಮೂತ್ರಪಿಂಡವನ್ನು ನಿಷ್ಕ್ರಿಯ ಮಾಡಿವೆ. ಅವಿನಾಷ್ಗೆ ಬೇರೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಇಲ್ಲದ ಕಾರಣ ಅವರು ಸುಧಾರಿಸಿಕೊಳ್ಳಲಿದ್ದಾರೆ. ಆದರೆ ಅದಕ್ಕೆ ಬಹಳ ಕಾಲ ಬೇಕಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಅವಿನಾಶ್ ಜತೆಯಲ್ಲೇ ಮತ್ತೊಬ್ಬ ಕಿರಿಯ ವಿದ್ಯಾರ್ಥಿ ಸೈಜು ಮೇಲೂ ರ್ಯಾಗಿಂಗ್ನಡೆದಿದೆ. ಈ ಸಂಬಂಧ ಆ ವಿದ್ಯಾರ್ಥಿಯೂ ದೂರು ನೀಡಿದ್ದಾನೆ. ದೇಹದ ವಿವಿಧೆಡೆ ಗಾಯ ಆಗಿರುವುದರಿಂದ ಆತ ಖಾಸಗಿ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರ್ಯಾಗಿಂಗ್ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಅವಿನಾಶ್ ಮತ್ತು ಶೈಜು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ಅಡಿ ಪ್ರಕರಣ ದಾಖಲಿಸಲಾಗಿದೆ. ಅವಿನಾಶ್ ದಲಿತ ಸಮುದಾಯದವನು. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನವಿ: ‘ಮಗನ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಯಾರಾದರೂ ನೆರವು ನೀಡಿ’ ಎಂದು ಅವಿನಾಶ್ ತಂದೆ ಮನವಿ ಮಾಡಿಕೊಂಡಿದ್ದಾರೆ.
Comments are closed.