ಇಂಫಾಲ್: ತಮ್ಮ ಖಾತೆಯಲ್ಲಿದ್ದ ಹಣವನ್ನು ತೆಗೆಯಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಗ್ರಾಹಕರು ಎಸ್ ಬಿಐಗೆ ಸೇರಿದ 2ಶಾಖೆಗಳನ್ನು ಧ್ವಂಸಗೊಳಿಸಿರುವ ಘಟನೆ ಮಣಿಪುರದಲ್ಲಿ ನಡೆದಿದೆ.
ರೊಚ್ಚಿಗೆದ್ದ ಜನರು ಬ್ಯಾಂಕ್ ನ ಕಿಟಕಿ, ಗಾಜುಗಳನ್ನು ಪುಡಿಗೈದಿದ್ದಾರೆ, ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸ್ ಗಾಯಗೊಂಡಿರುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಘರ್ಷಣೆಯಿಂದಾಗಿ ಬ್ಯಾಂಕ್ ಕೆಲಸ ಸ್ಥಗಿತಗೊಳಿಸಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
500, 1000 ರೂ. ನೋಟು ನಿಷೇಧದ ನಂತರ ಒಬ್ಬ ಗ್ರಾಹಕ ವಾರಕ್ಕೆ 24 ಸಾವಿರ ರೂಪಾಯಿ ಕ್ಯಾಶ್ ತೆಗೆಯಬಹುದು ಎಂದು ಆರ್ ಬಿಐ ಸೂಚಿಸಿತ್ತು. ಅದರಂತೆ ಯೂನಿರ್ವಸಿಟಿಯ ಇಬ್ಬರು ಗ್ರಾಹಕರು ತಲಾ 24 ಸಾವಿರ ರೂ. ನಗದು ಕೊಡುವಂತೆ ಹೇಳಿದಾಗ, ಅದಕ್ಕೆ ಎಸ್ ಬಿಐ ಬ್ಯಾಂಕ್ ಕ್ಯಾಶಿಯರ್ ನಿರಾಕರಿಸಿದ್ದರು.
ಬ್ಯಾಂಕ್ ಮ್ಯಾನೇಜರ್ ಪ್ರಸಾದ್ ಜೈನ್ ಕೂಡಾ, ಅಷ್ಟು ದೊಡ್ಡ ಮೊತ್ತ ಕೊಡಲು ಸಾಧ್ಯವಿಲ್ಲ ಎಂದಾಗ ಗ್ರಾಹಕರಿಬ್ಬರು ಸಿಟ್ಟಿಗೆದ್ದಿರುವುದಾಗಿ ವರದಿ ವಿವರಿಸಿದೆ. ಉಳಿತಾಯ ಖಾತೆಯಿಂದ ಪ್ರತಿ ಗ್ರಾಹಕ ಕೇವಲ 2 ಸಾವಿರ ರೂಪಾಯಿ ಮಾತ್ರ ತೆಗೆದುಕೊಳ್ಳಬೇಕೆಂದು ಮ್ಯಾನೇಜರ್ ಹೇಳಿರುವುದಾಗಿ ಗ್ರಾಹಕ ಬಿರೇನ್ ಹೊರಗೆ ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತಿದ್ದವರಿಗೆ ಹೇಳಿದಾಗ ರೊಚ್ಚಿಗೆದ್ದಿರುವುದಾಗಿ ವರದಿ ವಿವರಿಸಿದೆ.
Comments are closed.