ರಾಷ್ಟ್ರೀಯ

ನೋಟು ನಿಷೇಧದ ವಿರುದ್ಧ ತಿರುಗಿ ಬಿದ್ದ ಬಿಜೆಪಿ ಸಂಸದರು

Pinterest LinkedIn Tumblr

note-banನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಸಮರ ಸಾರಿ ನೋಟು ನಿಷೇಧ ಜಾರಿಗೊಳಿಸಿರುವ ನಿರ್ಧಾರದ ವಿರುದ್ಧ ಬಿಜೆಪಿಯ ಮುಖಂಡರು ಮತ್ತು ಸಂಸದರೇ ಅಸಮಧಾನ ವ್ಯಕ್ತಪಡಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಉತ್ತರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಎದುರಾಗಿರುವ ಚುನಾವಣೆಗಳ ಬಗ್ಗೆ ಚರ್ಚಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಕ್ಷದ ಸಂಸದರ ಸಭೆ ಕರೆದಿದ್ದರು. ಆದರೆ, ನೋಟ್ ಬ್ಯಾನ್ ಕುರಿತಂತೆ ಬಿಜೆಪಿ ಸಂಸದರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿಯೇ ಬಿಜೆಪಿ ಸಂಸದರು ನೋಟು ನಿಷೇಧ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಬುಧುವಾರ ನಡೆಯಲಿದ್ದ ಸಭೆಯನ್ನು ಮಾರನೇ ದಿನಕ್ಕೆ ಮುಂದೂಡಲಾಗಿತ್ತು. ಆದರೆ, ಗುರುವಾರದಂದು ಕೂಡಾ ಸಂಸದರು ಸಭೆಗೆ ಹಾಜರಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅನಾಮಧೇಯರಾಗಿರಲು ಬಯಸಿರುವ ಬಿಜೆಪಿ ಸಂಸದರು ಖಾಸಗಿ ಚಾನೆಲ್‌ಗಳೊಂದಿಗೆ ನೋಟು ನಿಷೇಧ ಕುರಿತಂತೆ ತಮ್ಮ ನೋವು ತೋಡಿಕೊಂಡಿದ್ದು, ತಮ್ಮ ತಮ್ಮ ಸ್ವಕ್ಷೇತ್ರಗಳಲ್ಲಿ ಜನರ ಕೋಪವನ್ನು ಎದುರಿಸಬೇಕಾಗಿದೆ. ಬ್ಯಾಂಕ್‌ ಮತ್ತು ಎಟಿಎಂಗಳಲ್ಲಿ ಹಣ ದೊರೆಯದಿರುವ ಬಗ್ಗೆ ಜನತೆ ನಮ್ಮ ಮನೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ಮೋದಿಯವರನ್ನು ಹೊಗಳುತ್ತಿರುವ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಉತ್ತರಪ್ರದೇಶದಲ್ಲಿ ಹಾಕುವಂತೆ ಅಮಿತ್ ಶಾ ಪ್ರಸ್ತಾವನೆ ಸಲ್ಲಿಸಿದ್ದರೂ ಬಿಜೆಪಿ ಸಂಸದರು ಮಾತ್ರ ಮೋದಿ ಬ್ಯಾನರ್‌ಗಳನ್ನು ಹಾಕಿದಲ್ಲಿ ಜನತೆಯ ಆಕ್ರೋಶ ಎದುರಿಸಬೇಕಾಗುತ್ತದೆ ಎನ್ನುವ ಆತಂಕದಿಂದ ತಮ್ಮ ತಣ್ಣನೆಯ ಪ್ರತಿಕ್ರಿಯೆ ತೋರಿದ್ದಾರೆ.

Comments are closed.