ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ಬುಧವಾರದಿಂದ ಆರಂಭವಾಗಿದ್ದು, ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜ್ಯ ಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿತು.
ರಾಜ್ಯಸಭೆ ನೋಟ್ ನಿಷೇಧ ವಿಷಯದ ಕುರಿತು ಚರ್ಚೆಗೆ ಒಪ್ಪಿಗೆ ಸೂಚಿಸಿದ್ದು, ರಾಜ್ಯಸಭೆ ಉಪಾಧ್ಯಕ್ಷ ಪಿ.ಜೆ.ಕುರಿಯನ್ ಅವರು, ಇಂದು ಸಂಜೆ 6 ಗಂಟೆಯವರೆಗೆ ನೋಟ್ ನಿಷೇಧದ ಬಗ್ಗೆ ಚರ್ಚಿಸಬಹುದು ಎಂದು ಹೇಳಿದ್ದಾರೆ.
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಆನಂದ್ ಶರ್ಮಾ ಅವರು, ಗಣಿಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗಳ ಅದ್ದೂರಿ ವಿವಾಹ ವಿಚಾರವನ್ನು ಪ್ರಸ್ತಾಪಿಸಿದರು. ಕರ್ನಾಟಕದ ನಿಮ್ಮ ಪಕ್ಷದ ಮುಖಂಡನೊಬ್ಬನ ಮಗಳ ಮದುವೆ ಅದ್ಧೂರಿಯಾಗಿ ಮಾಡಲಾಗುತ್ತಿದೆ. ನಿಮ್ಮ ಪಕ್ಷದ ನಾಯಕರು ಮದುವೆಯಲ್ಲಿ ತಾ ಮುಂದು ನಾ ಮುಂದು ಎಂದು ಭಾಗಿಯಾಗಿದ್ದಾರೆ. 500 ಕೋಟಿಗೂ ಹೆಚ್ಚು ಹಣ ವ್ಯಯಮಾಡಲಾಗುತ್ತಿದೆ. ಎಲ್ಲಿಂದ ಬಂತು ಈ ಹಣ, ಅದು ಕಪ್ಪುಹಣವಲ್ಲವೆ? ಮೊದಲು ಅವರನ್ನು ಬಂಧಿಸಿ ಎಂದು ಒತ್ತಾಯಿಸಿದರು. ಅಲ್ಲದೆ ಇದೇನಾ ನಿಮ್ಮ ಕಪ್ಪು ಹಣದ ವಿರುದ್ಧದ ಹೋರಾಟ ಎಂದು ಪ್ರಶ್ನಿಸಿದರು.
ಒಂದೇ ಒಂದು ಘೋಷಣೆ ಮೂಲಕ ರಾತ್ರೋರಾತ್ರಿ ದೇಶಾದ್ಯಂತ ಚಲಾವಣೆಯಲ್ಲಿದ್ದ ಶೇ.86ರಷ್ಟು 500 ಹಾಗೂ 1000 ನೋಟ್ ಗಳನ್ನು ನಿಷೇಧಿಸಲಾಗಿದೆ. ಇದೆಲ್ಲವೂ ಕಪ್ಪು ಹಣವೇ? ಎಂದು ಆನಂದ್ ಶರ್ಮಾ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇನ್ನು ಸರ್ಕಾರದ ನೋಟ್ ನಿಷೇಧದ ನಿರ್ಧಾರವನ್ನು ಸಮರ್ಥಿಸಿಕೊಂದ ಕೇಂದ್ರ ವಿದ್ಯುತ್ ಮತ್ತು ಕಲ್ಲಿದ್ದಲು ಖಾತೆ ಸಚಿವ ಪಿಯೂಷ್ ಗೋಯಲ್ ಅವರು, ಸರ್ಕಾರದ ನಿರ್ಧಾವನ್ನು ಇಡೀ ದೇಶವೇ ಸ್ವಾಗತಿಸಿದೆ. ಇದರಿಂದ ಅಪ್ರಾಣಿಕರಿಗೆ ತೊಂದರೆಯಾಗಿದೆ. ಪ್ರಮಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ನೋಟ್ ನಿಷೇಧದ ನಿರ್ಧಾರವನ್ನು ನಾವು ಯಾವತ್ತೂ ಸರ್ಜಿಕಲ್ ಸ್ಟ್ರೈಕ್ ಅಂತ ಕರೆದಿಲ್ಲ ಎಂದರು.
ಬಿಎಸ್ವೈ ,ಪರಮೇಶ್ವರ್ ಸೇರಿದಂತೆ ಗಣ್ಯರು ಭಾಗಿ
ರೆಡ್ಡಿ ಪುತ್ರಿ ಬ್ರಹ್ಮಿಣಿ ವಿವಾಹದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಜಿ.ಪರಮೇಶ್ವರ್ ,ಇಂಧನ ಸಚಿವ ಡಿ.ಕೆ.ಶಿವಕುಮಾರ್,ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ,ಕಾಂಗ್ರೆಸ್ ನಾಯಕರು ಸಿನಿಮಾ ರಂಗದ ಗಣ್ಯರು ಭಾಗಿಯಾಗಿದ್ದಾರೆ.
ರಾಷ್ಟ್ರೀಯ
Comments are closed.