ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ದೇಶದಲ್ಲಿ ನಗದು ಹಣಕ್ಕಾಗಿ ಜನ ಪರದಾಡುತ್ತಿದ್ದು, ಇನ್ನೂ ಎರಡರಿಂದ ಮೂರು ವಾರದಲ್ಲಿ ದೇಶಾದ್ಯಂತ ಎಲ್ಲಾ ಎಟಿಎಂಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅರುಣ್ ಜೇಟ್ಲಿ ಅವರ, ದಿಢೀರ್ ನೋಟ್ ನಿಷೇಧಿಸಿರುವುದರಿಂದ ಸಾಮಾನ್ಯ ಜನರಿಗೆ ಕಷ್ಟವಾಗಿದ್ದರೂ ಕೇಂದ್ರ ಸರ್ಕಾರದ ನಿರ್ಧಾವನ್ನು ಜನ ಬೆಂಬಲಿಸಿದ್ದಾರೆ. ಎಲ್ಲರೂ ಬ್ಯಾಂಕ್ ಮೂಲಕ ವ್ಯವಹಾರ ಮಾಡುವುದು ತುಂಬಾ ಸುರಕ್ಷಿತವಾದದ್ದು. ಹೀಗಾಗಿ ನಿಮ್ಮಲ್ಲಿರುವ ಎಲ್ಲಾ ಹಣವನ್ನು ಬ್ಯಾಂಕ್ ಜಮೆ ಮಾಡಿ. ಬಳಿಕ ಚೆಕ್, ಡಿಡಿ ಹಾಗೂ ಕಾರ್ಡ್ ಗಳ ಮೂಲಕ ವ್ಯವಹಾರ ನಡೆಸಿ ಎಂದು ಮನವಿ ಮಾಡಿದರು.
ನೋಟ್ ವಿನಿಮಯ ಮಾಡಿಕೊಳ್ಳಲು ಆತುರ ಬೇಡ, ಅದಕ್ಕೆ ಡಿಸೆಂಬರ್ 30ರವರೆಗೆ ಕಾಲವಾಶ ಇದೆ. ಕೆಲವು ದಿನಗಳ ನಂತರ ಬ್ಯಾಂಕ್ ಗೆ ಹೋದರ ಹಾಗ ನೀವು ಕ್ಯೂನಲ್ಲಿ ನಿಲ್ಲಬೇಕಾದ ಅಗತ್ಯ ಇರಲ್ಲ ಎಂದರು.
ಬ್ಯಾಂಕ್ ಮತ್ತು ಫೋಸ್ಟ್ ಆಫೀಸ್ ಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಕ್ಯೂ ಕಡಿಮೆಯಾಗಲಿದೆ. ಜನರಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗುತ್ತಿರುವುದು ಸಹಜ. ಆದರೂ ಜನರು ತಾಳ್ಮೆಯಿಂದ ಇರಬೇಕು. ಎಟಿಎಂಗಳಲ್ಲಿ ತಾಂತ್ರಿಕ ಬದಲಾವಣೆ ಮಾಡಲು ಕಾಲಾವಕಾಶ ಹಿಡಿಯುತ್ತದೆ. ಹಾಗಾಗಿ ಎಟಿಎಂ ಎಂದಿನಂತೆ ಕಾರ್ಯಾಚರಿಸಿ ಹೊಸ ನೋಟು ಸಿಗಲು 2 ವಾರ ಬೇಕಾಗಲಿದೆ ಎಂದು ವಿವರಿಸಿದ್ದಾರೆ.
ಇದೇ ವೇಳೆ ಇತ್ತೀಚಿಗೆ ಬ್ಯಾಂಕ್ ಗಳಿಗೆ ಭಾರಿ ಪ್ರಮಾಣದ ಹಣ ಜಮೆಯಾಗಿದ್ದು, ಬಿಜೆಪಿ ನಾಯಕರಿಗೆ ನೋಟ್ ನಿಷೇಧದ ಮಾಹಿತಿ ಇತ್ತು ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಜೇಟ್ಲಿ, ಸಾಮಾನ್ಯವಾಗಿ ಸೆಪ್ಟೆಂಬರ್ ನಲ್ಲಿ ಬ್ಯಾಂಕ್ ಗಳಿಗೆ ಹೆಚ್ಚಿನ ಹಣ ಜಮೆಯಾಗುತ್ತದೆ. ವೇತನ, ಬಾಕಿ ವೇತನ ಸೇರಿದಂತೆ ಬೇರೆ ಕಾರಣಗಳಿರುತ್ತವೆ. ಆದರೆ ಸೂಕ್ತ ಮಾಹಿತಿ ಇಲ್ಲದೆ ಈ ರೀತಿ ಆರೋಪ ಮಾಡಬಾರದು ಎಂದರು.
ನೋಟ್ ನಿಷೇಧಿಸಿದ ಮೊದಲ ದಿನದಿಂದಲೂ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಜನರು ಇದಕ್ಕೆ ಕಿವಿಗೊಡಬಾರದು. ಈ ಮುಂಚೆ ನೋಟ್ ನಿಷೇಧದ ಬಗ್ಗೆ ಕೆಲವರಿಗೆ ಗೊತ್ತಿತ್ತು ಎಂದು, ಈಗ ದೇಶದಲ್ಲಿ ಉಪ್ಪಿನ ಕೊರತೆ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಜೇಟ್ಲಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
Comments are closed.