ಜಮ್ಮು: ಜಮ್ಮು ಕಾಶ್ಮೀರದ ಪಾಕ್ ಗಡಿಯ ಪೂಂಚ್ ಹಾಗೂ ರಜೋರಿ ವಲಯದಲ್ಲಿ ಸೋಮವಾರ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಒಬ್ಬ ಯೋಧ ಸಾವಿಗೀಡಾಗಿದ್ದಾರೆ. ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.
ಪಾಕಿಸ್ತಾನ ಪಡೆ ಮಧ್ಯಾಹ್ನ ರಜೋರಿ ಜಿಲ್ಲೆಯಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಯೋಧ ಸಾವಿಗೀಡಾಗಿದ್ದಾರೆ. ಇದಕ್ಕೂ ಮುನ್ನ ಬೆಳಿಗ್ಗೆ 9ಕ್ಕೆ ಪೂಂಚ್ ಜಿಲ್ಲೆಯ ಬಾಲ್ಕೋಟ್ ಮತ್ತು ಮಾನ್ಕೋಟ್ ಪ್ರದೇಶದಲ್ಲಿ ಅಪ್ರಚೋದಿತ ದಾಳಿ ನಡೆದಿದೆ. ಭಾರಿ ಪ್ರಮಾಣದ 120 ಎಂಎಂ, 83 ಎಂಎಂ ಫಿರಂಗಿಗಳು ಹಾಗೂ ಸ್ವಯಂಚಾಲಿತ ಬಂದೂಕುಗಳನ್ನು ಬಳಸಿ ದಾಳಿ ಮಾಡಿದೆ. ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದೆ ಎಂದು ಸೇನೆ ವಕ್ತಾರರು ತಿಳಿಸಿದ್ದಾರೆ.
ಉರಿ ಮೇಲೆ ಉಗ್ರರು ದಾಳಿ ಮಾಡಿದ ಬಳಿಕ ಭಾರತೀಯ ಸೇನೆ ನಡೆಸಿದ ನಿರ್ಧಿಷ್ಟ ದಾಳಿಯ ನಂತರ ಪಾಕ್ ಸೇನೆ ಗಡಿಯಲ್ಲಿ 60 ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದೆ. ಇದರಲ್ಲಿ ಒಬ್ಬ ಪೊಲೀಸ್, ಮೂವರು ನಾಗರಿಕರು ಸೇರಿದಂತೆ ಎಂಟು ಮಂದಿ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಒಟ್ಟು 40 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.
Comments are closed.