ಲಕ್ನೊ: ಹೊಸ ಪಕ್ಷ ರಚಿಸುವುದಿಲ್ಲ. ಪಕ್ಷದ ವರಿಷ್ಠರಾದ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಬಯಸಿದ್ದರೆ ನನ್ನ ಸ್ಥಾನದಿಂದ ಕೆಳಗಿಳಿಯಲೂ ಸಿದ್ಧನಿದ್ದೆ ಎಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ಸಮಾಜವಾದಿ ಪಕ್ಷವನ್ನು ಹೋಳು ಮಾಡಿ ಹೊಸ ಪಕ್ಷ ರಚಿಸುತ್ತಾರೆ ಎಂಬ ಊಹಾಪೋಹದ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ಬಿರುಸಿನ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷದೊಳಗಿನ ಬಿಕ್ಕಟ್ಟಿನ ಕುರಿತು ಚರ್ಚಿಸಲು ಸೋಮವಾರ ಇಲ್ಲಿನ ಪಕ್ಷದ ಮುಖ್ಯ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಅವರು ಕರೆದಿರುವ ಮಂತ್ರಿಗಳು, ಶಾಸಕರು, ಸಂಸದರ ಸಭೆಯಲ್ಲಿ ಅವರು ಮಾತನಾಡಿದರು. ಸಭೆಗೂ ಮುನ್ನ ಪಕ್ಷದ ಕಾರ್ಯಕರ್ತರು ಪರಸ್ಪರ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದು ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
‘ಪಕ್ಷದ ವರಿಷ್ಠರು ಹಾಗೂ ನನ್ನ ತಂದೆ ಮುಲಾಯಂ ಸಿಂಗ್ ಯಾದವ್ ಅವರು ನನ್ನ ರಾಜಕೀಯ ಗುರು’ ಎಂದು ಭಾವುಕರಾಗಿ ನುಡಿದ ಅಖಿಲೇಶ್, ‘ಮುಖ್ಯಮಂತ್ರಿಯಾದ ಬಳಿಕ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇನೆ. ನಾನೇಕೆ ಹೊಸ ಪಕ್ಷ ಕಟ್ಟಬೇಕು’ ಎಂದು ಪ್ರಶ್ನಿಸಿದರು. ‘ಕೆಲ ವ್ಯಕ್ತಿಗಳು ಕುಟುಂಬದೊಳಗೆ ಭಿನ್ನಮತ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು’.
Comments are closed.