ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ದಾಳಿಗೆ ಓರ್ವ ಯೋಧ ಹುತಾತ್ಮನಾಗಿ ಮೂವರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ.
ಸುಶೀಲ್ ಕುಮಾರ್ ಹುತಾತ್ಮರಾದ ಯೋಧರಾಗಿದ್ದಾರೆ ಹೇಳಲಾಗುತ್ತಿದೆ. ಕನಛಕ್, ಅಖ್ನೂರ್, ಅರ್ನಿಯಾ ಮತ್ತು ಇನ್ನಿತರೆ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ. ಭಾರತೀಯ ಸೇನೆ ಹಾಗೂ ಪಾಕಿಸ್ತಾನ ಸೇನೆ ಮಧ್ಯೆ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜಮ್ಮುವಿನ ಆರ್ ಎಸ್ ಪುರ, ಪರ್ಗ್ವಾಲ್ ಮತ್ತು ಕನಚಕ್ ಪ್ರದೇಶಗಳ ಅಂತರಾಷ್ಟ್ರೀಯ ಗಡಿಯಲ್ಲಿರುವ ಸೇನಾ ಕೇಂದ್ರಗಳು ಹಾಗೂ ನಾಗರಿಕ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ದಾಳಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಕಳೆದ ರಾತ್ರಿ 7 ಗಂಟೆ ಸುಮಾರಿಗೆ ಪಾಕಿಸ್ತಾನ ಸೇನೆ ಭಾರತೀಯ ಸೇನಾ ಕೇಂದ್ರದ ಮೇಲೆ ಶೆಲ್ ಗಳ ದಾಳಿ ನಡೆಸಿದೆ. ಇದರಿಂದ ಇಬ್ಬರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಭಾರೀ ಪ್ರಮಾಣದ ಗುಂಡಿನ ಚಕಮಕಿ ನಡೆಯುತ್ತಿರುವುದರ ಪರಿಣಾಮ ಗಡಿಯಲ್ಲಿ ನೆಲೆಸಿದ್ದ ಜನರ ಸಾಕಷ್ಟು ಆಸ್ತಿಪಾಸ್ತಿಗಳಿಗೆ ನಾಶವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
Comments are closed.