ತಿರುವನಂತಪುರಂ: ಕೋಪದ ಭರದಲ್ಲಿ ಭದ್ರತಾ ಸಿಬ್ಬಂದಿಯನ್ನು ಹಮ್ಮರ್ ಎಸ್ಯುುವಿ ಕಾರು ನುಗ್ಗಿಸಿ ಕೊಲೆಗೈದದ್ದಕ್ಕಾಗಿ ಕಣ್ಣೂರು ಕೇಂದ್ರೀಯ ಸೆರೆಮನೆಯಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೇರಳದ ಬೀಡಿ ದೊರೆ ಮೊಹಮ್ಮದ್ ನಿಶಮ್ ಇದೀಗ ಸೆರೆಮನೆಯೊಳಗಿನಿಂದಲೇ ತಮ್ಮ ಉದ್ಯಮ ನಡೆಸುತ್ತಿರುವ ಸಂಗತಿ ಬಹಿರಂಗಗೊಂಡಿದೆ.
ಮೊಹಮ್ಮದ್ ನಿಶಮ್ ಬಂಧುಗಳ ಪರವಾಗಿ ಸಲ್ಲಿಕೆಯಾಗಿರುವ ದೂರು ಒಂದರಿಂದ ಈ ವಿಚಾರ ಬೆಳಕಿಗೆ ಬಂದಿದೆ.
2016ರ ಜನವರಿಯಲ್ಲಿ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದ ನಿಶಮ್ ಗೆ ಸೆರೆಮನೆಯಲ್ಲಿ ವಿಐಪಿ ಆತಿಥ್ಯ ಲಭಿಸುತ್ತಿದ್ದು, ಎರಡು ಸೆಲ್ ಫೋನ್ಗಳ ಸಂಪರ್ಕ ವ್ಯವಸ್ಥೆ ಒದಗಿಸಿಕೊಡಲಾಗಿದೆ. ಕಂಪೆನಿಯ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುವ ಸಲುವಾಗಿ ಆತನ ಕಚೇರಿ ಸಿಬ್ಬಂದಿಯೇ ಈ ಸೆಲ್ಫೋನ್ಗಳನ್ನು ರಿಚಾರ್ಜ್ ಮಾಡುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಶುಕ್ರವಾರ ದಾಖಲಿಸಲಾಗಿದ್ದ ದೂರು ತಿಳಿಸಿದೆ.
ತನಿಖೆಗಾಗಿ ಬೆಂಗಳೂರಿಗೆ ಒಯ್ಯುವ ವೇಳೆಯಲ್ಲಿ 40ರ ಹರೆಯದ ಬೀಡಿ ಉದ್ಯಮಿ ಜೊತೆಗೆ ಖುದ್ದು ಮಾತುಕತೆಗೆ ಅನುಕೂಲವಾಗುವಂತೆ ಕಂಪೆನಿಯ ಮ್ಯಾನೇಜರ್ ಮತ್ತು ಗೆಳೆಯನೊಬ್ಬನಿಗೆ ಜೊತೆಯಲ್ಲೇ ಸಂಚರಿಸಲು ಅವಕಾಶ ಮಾಡಿಕೊಡಲಾಗಿತ್ತು ಎಂದೂ ದೂರು ಹೇಳಿದೆ. ಪೊಲೀಸರ ಬಿಗಿ ಕಾವಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ಗೆಳೆಯನ ಸೆಲ್ ಫೋನ್ ಬಳಸಿ ನಿಷಮ್ ತನ್ನ ಬಂಧುಗಳಿಗೆ ಬೆದರಿಕೆ ಹಾಕಿದ್ದ ಎಂದೂ ದೂರು ಹೇಳಿದೆ. ದೂರಿನ ಬಗ್ಗೆ ತನಿಖೆಗೆ ಕಣ್ಣೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಗುರುದಿನ್ ತನಿಖೆಗೆ ಆಜ್ಞಾಪಿಸಿದ್ದಾರೆ.
Comments are closed.