ನವದೆಹಲಿ: ಉತ್ತರ ಪ್ರದೇಶದ ಸುಲ್ತಾನಪುರ ಕ್ಷೇತ್ರದ ಬಿಜೆಪಿ ಸಂಸದ ವರುಣ್ ಗಾಂಧಿ ಹನಿ ಟ್ರ್ಯಾಪ್ ಆಗಿದ್ದಾರಾ ಹೀಗೊಂದು ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಅಮೆರಿಕದ ಸಿ ಎಡ್ಮಂಡ್ ಅಲೆನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಿಂದಾಗಿ ಈ ಪ್ರಶ್ನೆ ಈಗ ಉದ್ಭವವಾಗಿದೆ.
ಕುಖ್ಯಾತ ಶಸ್ತ್ರಾಸ್ತ್ರ ದಲ್ಲಾಳಿ ಆಭಿಷೇಕ್ ವರ್ಮಾ ವರುಣ್ ಗಾಂಧಿ ಅವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ಬ್ಲಾಕ್ ಮೇಲ್ ಮಾಡಿದ್ದಕ್ಕೆ ಸಂಬಂಧಿಸಿದ ಸಾಕ್ಷ್ಯಗಳಿರುವ ಸಿಡಿ ಮತ್ತು ಫೋಟೋಗಳನ್ನು ಎಡ್ಮಂಡ್ ಅಲೆನ್ ಸೆ.16ರಂದು ಪ್ರಧಾನಿ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
ತನ್ನ ಪತ್ರದಲ್ಲಿ ಅಲೆನ್ ಅಭಿಷೇಕ್ ವರ್ಮಾಗೆ ಅನುಕೂಲವಾಗುಂತೆ ಯಾವುದಾದರೂ ಒಪ್ಪಂದ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ. ಪ್ರಧಾನಿ ಸಚಿವಾಲಯ ಅಲ್ಲದೇ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೂ ಈ ಸಾಕ್ಷ್ಯಗಳನ್ನು ಕಳುಹಿಸಿಕೊಟ್ಟಿದ್ದಾರೆ.
ವರ್ಮಾನ ವ್ಯವಹಾರ ಎದುರಾಳಿ ಸಿ.ಎಡ್ಮಂಡ್ ಅಲೆನ್ ಈ ಹಿಂದೆಯೂ ಅಭಿಷೇಕ್ ವರ್ಮಾನಿಗೆ ಸಂಬಂಧಿಸಿದ ಫೈಲ್ ವಿಡಿಯೊ ದೃಶ್ಯಾವಳಿ, ಫೋಟೋ ಮತ್ತು ಇ-ಮೇಲ್ ದಾಖಲೆಗಳನ್ನು ಸಿಬಿಐ ಅಧಿಕಾರಿಗಳಿಗೆ ನೀಡಿದ್ದರು.
ಅಭಿಷೇಕ್ ವರ್ಮಾ ಯಾರು?
ಅಮೆರಿಕ ಮೂಲದ ಶಸ್ತ್ರಾಸ್ತ್ರ ದಲ್ಲಾಳಿಯಾಗಿರುವ ಅಭಿಷೇಕ್ ವರ್ಮಾ ಮೇಲೆ ಶಸ್ತ್ರಾಸ್ತ್ರ ಪೂರೈಕೆಗೆ ಸಂಬಂಧಿಸಿದ ರಕ್ಷಣಾ ಇಲಾಖೆಯ ರಹಸ್ಯ ಮಾಹಿತಿ ಹೊಂದಿದ ದಾಖಲೆ ಸೋರಿಕೆ, ಅಗಸ್ಟಾ ಹೆಲಿಕಾಪ್ಟರ್ ಖರೀದಿ ಹಗರಣ, ನೌಕಾ ಪಡೆಯ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎನ್ನುವ ಆರೋಪವಿದೆ. ಅಗಸ್ಟಾ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಈತ ದಲ್ಲಾಳಿ ಪಾತ್ರವನ್ನು ನಿರ್ವಹಿಸಿದ್ದಾನೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಈತನ ವಿರುದ್ಧ ಪ್ರಕರಣ ದಾಖಲಿಸಿ ಸಿಬಿಐ ತನಿಖೆ ನಡೆಸುತ್ತಿದೆ. 2012ರಲ್ಲಿ ಈತನನ್ನು ಸಿಬಿಐ ಬಂಧಿಸಿತ್ತು. ಬಳಿಕ ಜಾಮೀನಿನ ಮೇಲೆ ಅಭಿಷೇಕ್ ವರ್ಮಾ ಹೊರ ಬಂದಿದ್ದಾನೆ.
ವರುಣ್ ಗಾಂಧಿಗೆ ಹೇಗೆ ಸಂಬಂಧ?
ಸಂಸದ ವರುಣ್ ಗಾಂಧಿ ಈ ಹಿಂದೆ ರಕ್ಷಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು. ಈ ವೇಳೆ ವರುಣ್ ಗಾಂಧಿ ಅವರನ್ನು ಹನಿಟ್ರ್ಯಾಪ್ಗೆ ಬೀಳಿಸಿ ಬ್ಲಾಕ್ಮೇಲ್ ಮಾಡಿ ತನ್ನ ಪರವಾಗಿ ಕೆಲಸ ಮಾಡಿಸಿದ್ದರು ಎಂದು ಎಡ್ಮಂಡ್ ಎಲೆನ್ ಆರೋಪಿಸಿದ್ದಾರೆ. ತನ್ನ ಮೇಲಿನ ಆರೋಪವನ್ನು ವರುಣ್ ಗಾಂಧಿ ತಿರಸ್ಕರಿಸಿದ್ದಾರೆ.
Comments are closed.