ಭೋಪಾಲ್: ಭಾರತೀಯ ಸೇನೆ ಮಾತನಾಡುವುದಿಲ್ಲ; ಬದಲಿಗೆ ಶೌರ್ಯ ಪ್ರದರ್ಶಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಲ್ಲಿ ನಿರ್ಮಿಸಲಾಗಿರುವ ಶೌರ್ಯ ಸ್ಮಾರಕವನ್ನು ಶುಕ್ರವಾರ ಉದ್ಘಾಟಿಸುವ ಮುನ್ನ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದೊಳಗೆ ನಾವು ಶಾಂತಿ, ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದರೆ ಅದು ಸೇನೆ, ಬಿಎಸ್ಎಫ್, ಸಿಆರ್ಪಿಎಫ್, ನೌಕಾಪಡೆ ಯೋಧರ ತ್ಯಾಗದಿಂದ ಸಾಧ್ಯವಾಗಿದೆ ಎಂದು ಯೋಧರ ಗುಣಗಾನ ಮಾಡಿದರು.
ರಕ್ಷಣಾ ಸಾಮಗ್ರಿಗಳನ್ನು ದೇಶದಲ್ಲೇ ತಯಾರಿಸಲು ಹೆಚ್ಚು ಒತ್ತು ನೀಡುತ್ತಿದ್ದೇವೆ. ಭಾರತ ರಕ್ಷಣಾ ಸಾಮಗ್ರಿಗಳನ್ನು ರಪ್ತು ಮಾಡುವ ದಿನಗಳು ಬರಲಿವೆ ಎಂದು ಭರವಸೆ ನೀಡಲು ಬಯಸುತ್ತೇನೆ ಎಂದು ಹೇಳಿದರು.
ಯೆಮೆನ್ನಲ್ಲಿ ಭಾರತೀಯರನ್ನು ರಕ್ಷಣೆ ಮಾಡಲಾಯಿತು. ಇದೇ ವೇಳೆ ಭಾರತೀಯ ಸೇನೆ ಪಾಕಿಸ್ತಾನದ ನಾಲ್ವರನ್ನು ರಕ್ಷಣೆ ಮಾಡಿತು. ಇದು ಭಾರತದ ಮಾನವೀತೆಗೆ ಒಂದು ಉದಾಹರಣ ಎಂದರು.
ವಿಶ್ವಶಾಂತಿಗಾಗಿ ನಡೆಯುತ್ತಿರುವ ಕಾರ್ಯದಲ್ಲಿ ಭಾರತೀಯ ಸೇನೆಯ ಕೊಡುಗೆ ಅತಿ ದೊಡ್ಡದಿದೆ. ಪ್ರಾಕೃತಿಕ ವಿಕೋಪಗಳಾದಾಗ ಸೇನೆ ದೊಡ್ಡ ಸೇವೆಯನ್ನೇ ನೀಡಿ ಮಾನವೀಯತೆ ಮೆರೆದಿದೆ. ಇದನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ಸರ್ಕಾರ ಒಂದೇ ಶ್ರೇಣಿ ಒಂದೇ ಪಿಂಚಣಿ ಜಾರಿ ಮಾಡುವ ಮೂಲಕ ಮಾಜಿ ಸೈನಿಕರ ಬೇಡಿಕೆಯನ್ನು ಈಡೇರಿಸಿದೆ ಎಂದು ಹೇಳಿದರು.
ರಕ್ಷಣಾ ಸಚಿವ ಮನೋಹರ ಪರಿಕ್ಕರ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚವ್ಹಾಣ್ ಉಪಸ್ಥಿತರಿದ್ದರು.
Comments are closed.