ಲಕ್ನೊ: ಭಯೋತ್ಪಾದನೆ ಮಾನವೀಯತೆಯ ವೈರಿ. ಜಾಗೃತ ಜನರು ಭಯೋತ್ಪಾದನೆ ನಿರ್ಮೂಲನೆಗೆ ಸಹಕರಿಸುತ್ತಾರೆ. ಭಯೋತ್ಪಾದನೆಗೆ ಸಾಕಾರ ಮತ್ತು ಆಶ್ರಯ ನೀಡುವವರನ್ನು ಸದೆಬಡಿಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಗುಡುಗಿದರು.
ಇಲ್ಲಿನ ಐಷ್ಬಾಗ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಮೋತ್ಸವದಲ್ಲಿ ರಾಷ್ಟ್ರದ ಜನರಿಗೆ ವಿಜಯ ದಶಮಿ ಶಭಾಶಯ ಕೋರಿ ಭಾಷಣ ಮಾಡಿದ ಅವರು, ಉಗ್ರವಾದವನ್ನು ನಿರ್ಮೂಲನೆ ಮಾಡದೆ ಮಾನವೀಯತೆಗೆ ಆಶ್ರಯ ನೀಡಲು ಸಾಧ್ಯವಿಲ್ಲ. ಜಗತ್ತಿನ ಮಾನವತಾ ಶಕ್ತಿಗಳು ಒಂದಾಗಿವೆ ಎಂದು ಭಯೋತ್ಪಾದನೆಗೆ ಆಶ್ರಯ ನೀಡಿರುವ ರಾಷ್ಟ್ರಕ್ಕೆ ಎಚ್ಚರಿಕೆ ಸಂದೇಶ ನೀಡಿದರು.
ವಿಜಯ ದಶಮಿಯಂದು ರಾವಣನ ದಹನ ಮಾಡಲಾಗುತ್ತದೆ. ರಾವಣನ ದಹನ ಕಾರ್ಯದಿಂದ ಅರಿಯುವುದ ಸಾಕಷ್ಟಿದೆ. ನಮ್ಮೊಳಗಿನ ದುಷ್ಟತನ ದಹಿಸದೆ ಒಳಿತಾಗದು.
ರಾಮಾಯಣದಲ್ಲಿ ಬರುವ ಜಟಾಯು ಮಾಡಿದ ದಾಳಿ ಸಣ್ಣದಾದರು ಅದು ಕಡಿಮೆಯೇನಲ್ಲ. ಒಬ್ಬ ಸೀತೆಗಾಗಿ ಜಟಾಯು ಹೋರಾಟ ಮಾಡಿದ. ಈಗ ನಮ್ಮ ಮನೆಯಲ್ಲಿನ ಸೀತೆಯರ ರಕ್ಷಣೆಗೆ ನಾವು ಹೋರಾಟಕ್ಕೆ ಸಿದ್ಧರಾಗಬೇಕು. ಮಹಿಳೆ ಗೌರವ ಉಳಿಸಲು ಸಿದ್ಧರಾಗಿ. ಜಾತಿ, ಮತ, ಪಂಧಗಳನ್ನು ಬದಿಗಿಟ್ಟು ಒಂದಾಗಿ ಎಂದು ಕರೆ ನೀಡಿದರು.
ಯುದ್ಧಕ್ಕಿಂತ ಬುದ್ಧನತ್ತ ಹೋಗಲು ನಾವು ಬಯಸುತ್ತೇವೆ. ಯುದ್ಧಭೂಮಿಯಲ್ಲಿ ಗೀತೆಯನ್ನು ಬೋಧಿಸಿದ ನೆಲ ನಮ್ಮದು. ಯುದ್ಧ ಮತ್ತು ಶಾಂತಿಯನ್ನು ಸಮಾನವಾಗಿ ಪರಿಗಣಿಸಿದ ದೇಶ ನಮ್ಮದು ಎಂದು ಅವರು ನುಡಿದರು.
Comments are closed.