ರಾಷ್ಟ್ರೀಯ

ದಾದ್ರಿ ಪ್ರಕರಣ ಸಂಬಂಧ ಕೊಲೆ ಆರೋಪದಡಿ ಬಂಧಿತನಾಗಿದ್ದ ಶಂಕಿತ ಆರೋಪಿ ಸಾವು!

Pinterest LinkedIn Tumblr

dadri

ನವದೆಹಲಿ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ದಾದ್ರಿ ಪ್ರಕರಣ ಸಂಬಂಧ ಕೊಲೆ ಆರೋಪದಡಿ ಬಂಧಿತನಾಗಿದ್ದ ಶಂಕಿತ ಆರೋಪಿ 20 ವರ್ಷದ ರಾಬಿನ್ ಅಲಿಯಾಸ್ ರವಿ ಶಂಕಾಸ್ಪದವಾಗಿ ಸಾವನ್ನಪ್ಪಿದ್ದಾನೆ.

ದಾದ್ರಿ ಪ್ರಕರಣದಲ್ಲಿ ಮಹಮದ್ ಅಖ್ಲಾಕ್ ಕೊಲೆ ಆರೋಪದಡಿ ಬಂಧಿತನಾಗಿದ ರವಿ ಶಂಕಾಸ್ಪದವಾಗಿ ಸಾವನ್ನಪ್ಪಿದ್ದು, ಕಿಡ್ನಿ ವೈಫಲ್ಯದಿಂದ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ರವಿ ಸಾವನ್ನು ಶಂಕೆಯಿಂದ ನೋಡುತ್ತಿರುವ ಆತನ ಪೋಷಕರು ಆತನನ್ನು ಪೊಲೀಸರೇ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂತ್ರಪಿಂಡ ವೈಫಲ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರವಿಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ರವಿ ಪೋಷಕರು ರವಿಯನ್ನು ಆಸ್ಪತ್ರೆಗೆ ಕರೆತಂದಾಗ ಆತನ ಸ್ಥಿತಿ ಗಂಭೀರವಾಗಿತ್ತು. ಆತನನ್ನು ಪೊಲೀಸರೇ ಹೊಡೆದು ಕೊಂದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಇನ್ನು ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎಲ್ ಎನ್ ಜೆಪಿ ಆಸ್ಪತ್ರೆ ಸೂಪರಿಂಟೆಂಡ್ ಡಾ.ಜೆಸಿ ಪಾಸ್ಸೇ ಅವರು, ರವಿಯನ್ನು ರಾತ್ರಿ ಸುಮಾರು 12 ಗಂಟೆಯ ಹೊತ್ತಿಗೆ ಕರೆತರಲಾಗಿತ್ತು. ಆತ ಆಸ್ಪತ್ರೆಗೆ ಬಂದಾಗ ಗಂಭೀರ ಪರಿಸ್ಥಿತಿಯಲ್ಲಿದ್ದ. ಆತನ ರಕ್ತದೊತ್ತಡ ಅಧಿಕವಾಗಿತ್ತು. ಹಾಗೂ ಆತನ ಮೂತ್ರಪಿಂಡಗಳು ವಿಫಲವಾಗಿದ್ದವು. ಆದರೂ ನಾವು ಚಿಕಿತ್ಸೆ ನಡೆಸಿದೆವು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ಕಳೆದೊಂದು ವರ್ಷದಿಂದಲೂ ದಾದ್ರಿ ಪ್ರಕರಣ ಸಂಬಂಧ ಬಂಧಿತನಾಗಿದ್ದ ರವಿಯನ್ನು ದೆಹಲಿಯ ನೋಯ್ಡಾ ಜೈಲಿನಲ್ಲಿರಿಸಲಾಗಿತ್ತು.

Comments are closed.