ರಾಷ್ಟ್ರೀಯ

ನ್ಯಾಯಾಲಯದ ಆವರಣದಲ್ಲೇ ವಕೀಲ ತಂದೆಯನ್ನು ಇರಿದ ಪುತ್ರ

Pinterest LinkedIn Tumblr

lawyer-sonಚೆನ್ನೈ: ನುಂಗಂಬಾಕ್ಕಂ ರೈಲು ನಿಲ್ದಾಣದಲ್ಲಿ ನಡೆದ ಟೆಕ್ಕಿ ಸ್ವಾತಿ ಬರ್ಬರ ಹತ್ಯೆ ಪ್ರಕರಣ ಮರೆಯಾಗುವುದಕ್ಕೂ ಮುನ್ನವೇ ಮದ್ರಾಸ್ ನಲ್ಲಿ ಮತ್ತೊಂದು ಪ್ರಕರಣವೊಂದು ನಡೆದಿದ್ದು, ಚೆನ್ನೈ ಜನತೆ ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ.

ಮದ್ರಾಸ್ ಹೈ ಕೋರ್ಟ್ ಆವರಣದಲ್ಲಿ ಪುತ್ರನೊಬ್ಬ ವಕೀಲ ತಂದೆಯೊಬ್ಬರನ್ನು ಇರಿದು ಹತ್ಯೆ ಮಾಡಲು ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.

ಮಣಿಮಾರನ್ ಪುತ್ರನಿಂದಲೇ ಇರಿತಕ್ಕೊಳಗಾದ ವಕೀಲನಾಗಿದ್ದಾರೆ. ರಾಜೇಶ್ ಎಂಬುವವರು ಇವರ ಪುತ್ರನಾಗಿದ್ದು, ನ್ಯಾಯಾಲಯದ ಆವರಣದಲ್ಲಿ ತಂದೆ ಹಾಗೂ ಪುತ್ರನ ನಡುವೆ ಕುಟುಂಬ ಸಮಸ್ಯೆ ಕುರಿತಂತೆ ವಾಗ್ವಾದಗಳು ನಡೆದಿವೆ. ಇದರಂತೆ ತಂದೆ ಮೇಲೆ ತೀವ್ರವಾಗಿ ಕೆಂಡಾಮಂಡಲವಾಗಿರುವ ರಾಜೇಶ್ ಚಾಕುವಿನಿಂದ ಮಣಿಮಾರನ್ ಅವರಿಗೆ ಇರಿದಿದ್ದಾನೆಂದು ತಿಳಿದುಬಂದಿದೆ.

ಮಣಿಮಾರನ್ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಮೊದಲನೇ ಪತ್ನಿಯ ಮಗಳಿಗೆ (ರಾಜೇಶ್ ತಂಗಿ) ಮದುವೆ ಮಾಡುವ ಸಲುವಾಗಿ ಗಂಡು ಹುಡುಕಲು ಸಹಾಯ ಮಾಡುವಂತೆ ಕೇಳಲು ರಾಜೇಶ್ ಮಣಿಮಾರನ್ ಅವರನ್ನು ಭೇಟಿಯಾಗಲು ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಬಂದಿದ್ದಾನೆ. ಈ ವೇಳೆ ಮಣಿಮಾರನ್ ಅವರು ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ತಂದೆ ಮಾತಿನಿಂದ ಬೇಸರ ಹಾಗೂ ತೀವ್ರ ಕೋಪಗೊಂಡ ರಾಜೇಶ್ ಚಾಕುವಿನಿಂದ ಇರಿದಿದ್ದಾನೆಂದು ಹೇಳಲಾಗುತ್ತಿದೆ.
ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದ ಮಣಿಮಾರನ್ ಅವರನ್ನು ವಕೀಲರು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಣಿಮಾರನ್ ಅವರ ತಲೆ, ಕತ್ತು ಹಾಗೂ ಕಿವಿಯಲ್ಲಿ ರಕ್ತಸ್ರಾವವಾಗುತ್ತಿತ್ತು ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ವಕೀಲರು ರಾಜೇಶ್ ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ರಾಜೇಶ್ ನನ್ನು ಸ್ಟೇನ್ಲೀ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜೇಶ್ ಅವರಿಗೆ ಅಂತಹ ಗಂಭೀರವಾದ ಯಾವುದೇ ಗಾಯಗಳಾದಿರುವುದಾಗಿ ಮೂಲಗಳು ತಿಳಿಸಿವೆ.
ಮಣಿಮಾರನ್ ಅವರು ನ್ಯಾಯಾಲಯದಲ್ಲಿದ್ದ ತಮ್ಮ ಚೇಂಬರ್ ನಲ್ಲಿ ಗುಮಾಸ್ತನೊಬ್ಬನೊಂದಿಗೆ ಕುಳಿತುಕೊಂಡಿದ್ದರು. ಈ ವೇಳೆ ರಾಜೇಶ್ ಒಳ ಬಂದಿದ್ದ. ಕೂಡಲೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ರಾಜೇಶ ತನ್ನ ಕೈಯಲ್ಲಿದ್ದ ಚಾಕುವಿನಿಂದ ಮಣಿಮಾರನ್ ಅವರಿಗೆ ಇರಿದುಬಿಟ್ಟ. ಮಣಿಯವರ ಕೂಗಾಟವನ್ನು ಕೇಳಿ ಒಳಬಂದಾಗ. ರಾಜೇಶ್ ಓಡಿಹೋಗುತ್ತಿದ್ದ. ಆದರೆ, ಸ್ಥಳದಲ್ಲಿದ್ದ ವಕೀಲರ ಗುಂಪು ಆತನನ್ನು ಹಿಡಿದುಕೊಂಡಿದ್ದರು ಎಂದು ಜಿ. ಚಂದ್ರಶೇಖರನ್ ಅವರು ಹೇಳಿದ್ದಾರೆ.

Comments are closed.