ರಾಷ್ಟ್ರೀಯ

ಸಮಾಜವಾದಿ ಪಕ್ಷ ಯಾವಾಗಲೂ ಉಗ್ರರ ಪರವಾಗಿರುತ್ತೆ: ಶಿವಪಾಲ್ ಸಿಂಗ್ ಯಾದವ್

Pinterest LinkedIn Tumblr

Shivpal-Yadavಲಖನೌ: ಆರ್ ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಲು ಹೋಗಿ ಸಚಿವರೊಬ್ಬರು ಸ್ವತಃ ತಾವೇ ವಿವಾದಕ್ಕೆ ಸಿಲುಕಿರುವ ಘಟನೆಯೊಂದು ಮಂಗಳವಾರ ನಡೆದಿದೆ.

ಸಮಾಜವಾದಿ ಪಕ್ಷ ಸದಕಾಲ ಭಯೋತ್ಪಾದಕರು ಹಾಗೂ ರಾಷ್ಟ್ರ ವಿರೋಧಿಗಳ ಪರವಾಗಿರುತ್ತದೆ ಎಂದು ಉತ್ತರ ಪ್ರದೇಶದ ಲೋಕೋಪಯೋಗಿ ಸಚಿವ ಶಿವಪಾಲ್ ಸಿಂಗ್ ಯಾದವ್ ಅವರು ನೀಡಿರುವ ಹೇಳಿಕೆಯ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಮುಲಾಯಂ ಸಿಂಗ್ ಯಾದವ್ ಅವರ ಸಹೋದರನಾಗಿರುವ ಶಿವಪಾಲ್ ಸಿಂಗ್ ಅವರು ಎತಾವಹ್ ಪ್ರದೇಶದಲ್ಲಿ ಮಾಧ್ಯಮವೊಂದರ ಬಳಿ ಹೇಳಿಕೆಯೊಂದನ್ನು ನೀಡಿದ್ದಾರೆ. ಮೂಲಗಳು ತಿಳಿಸಿರುವ ಪ್ರಕಾರ ಈ ವಿಡಿಯೋವನ್ನು ಸೋಮವಾರ ನೀಡಲಾಗಿದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷ ದೇಶವನ್ನು ಇಬ್ಬಾಗ ಮಾಡುವ ಚಟುವಟಿಕೆಗಳನ್ನು ನಡೆಸುತ್ತಿದ್ದು, ಕೋಮು ದ್ವೇಷವನ್ನು ಹುಟ್ಟು ಹಾಕುತ್ತಿದೆ. ಸಮಾಜವಾದಿ ಪಕ್ಷ ಯಾವಾಗಲೂ ಭಯೋತ್ಪಾದನೆ ಹಾಗೂ ರಾಷ್ಟ್ರ ವಿರೋಧಿಗಳ ಪರವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಈ ವಿಡಿಯೋ ಇದೀಗ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಸಮಾಜವಾದಿ ಪಕ್ಷದ ಸಚಿವರ ಈ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ನಾಲಿಗೆ ತಪ್ಪಿ ಮಾತನಾಡಿದ್ದರೂ ಆಡಳಿತಾರೂಢ ಪಕ್ಷ ನಿಜವಾದ ಮಾತನ್ನೇ ಹೇಳಿದೆ. ತನ್ನ ನಿಜವಾದ ಮುಖವನ್ನು ತೋರಿಸಿದೆ ಎಂದು ಹೇಳಿಕೊಂಡಿದೆ.
ಈ ಹಿಂದೆ ಮೊಹಮ್ಮದ್ ಅಜಂ ಖಾನ್ ಅವರು ಇದೇ ರೀತಿಯಾದ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ದಾವೂದ್ ಇಬ್ರಾಹಿಂ ಅವರು ಮುಲಾಯಂ ಸಿಂಗ್ ಅವರ ಹುಟ್ಟುಹಬ್ಬಕ್ಕೆ ಪ್ರಾಯೋಜಕರಾಗಿದ್ದರು ಎಂದು ಹೇಳಿದ್ದರು. ಇದೀಗ ಇದೇ ರೀತಿಯಾಗಿ ಶಿವಪಾಲ್ ಅವರೂ ಕೂಡ ಹೇಳಿಕೆ ನೀಡಿದ್ದಾರೆಂದು ಬಿಜೆಪಿ ವಕ್ತಾರ ವಿಜಯ್ ಬಹದ್ದೂರ್ ಪಥಾಕ್ ಅವರು ಹೇಳಿದ್ದಾರೆ.
ಶಿವಪಾಲ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಮಾಜವಾದಿ ಪಕ್ಷದ ಇತರೆ ನಾಯಕರು ನಿರಾಕರಿಸಿದ್ದಾರೆ.

Comments are closed.