ನವದೆಹಲಿ: ದೆಹಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳ ಪರ ವಕೀಲರಾಗಿ ರಾಜು ರಾಮಚಂದ್ರನ್ ಮತ್ತು ಸಂಜಯ್ ಹೆಗ್ಡೆಯವರನ್ನು ನೇಮಕ ಮಾಡಿಕೊಂಡಿರುವುದಕ್ಕೆ ಇಬ್ಬರು ಅಪರಾಧಿಗಳು ಮಂಗಳವಾರ ವಿರೋಧ ವ್ಯಕ್ತಪಡಿಸಿದ್ದಾರೆ.
ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿ ಸೆರೆವಾಸದಲ್ಲಿರುವ ಇಬ್ಬರು ಅಪರಾಧಿಗಳಾದ ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ಅವರ ಪರ ವಕೀಲರಾಗಿ ರಾಜು ರಾಮಚಂದ್ರನ್ ಮತ್ತು ಸಂಜಯ್ ಹೆಗ್ಡೆಯನ್ನು ನೇಮಕ ಮಾಡಲಾಗಿತ್ತು.
ಇದರಂತೆ ಪರ ವಕೀಲರಾಗಿ ರಾಮಚಂದ್ರನ್ ಮತ್ತು ಹೆಗ್ಡೆಯವರ ನೇಮಕ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಅಪರಾಧಿಗಳು ನ್ಯಾಯಮೂರ್ತಿಗಳಾದ ಟಿ.ಎಸ್ ಠಾಕೂರ್ ಮತ್ತು ದೀಪಕ್ ಮಿಶ್ರಾ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಪತ್ರದಲ್ಲಿ ನೇಮಕ ಮಾಡಿರುವ ಇಬ್ಬರು ವಕೀಲರು ತಮ್ಮ ವಿರುದ್ಧವೇ ಇದ್ದು, ನ್ಯಾಯಯುತವಾಗಿ ವಾದ ಮಂಡನೆ ಮಾಡಲು ಸಾಧ್ಯವಾಗುವುದಿಲ್ಲ. ಇಬ್ಬರು ವಕೀಲರು ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಖಾಸಗಿ ವಾಹಿನಿಯೊಂದರ ಚರ್ಚೆಯೊಂದರಲ್ಲಿ ಭಾಗವಹಿಸಿ ನಮ್ಮ ವಿರುದ್ಧ ಮಾತನಾಡಿದ್ದರು. ಹೀಗಾಗಿ ಈ ವಕೀಲರು ನಮ್ಮ ಪರವಾಗಿ ವಾದ ಮಂಡಿಸುವುದು ಬೇಡ ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.
ಸುಪ್ರಂಕೋರ್ಟ್ ನ ವಿಶೇಷ ನ್ಯಾಯಾಲಯ ನಿನ್ನೆ ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ 2 ವರ್ಷಕ್ಕೂ ಹೆಚ್ಚು ಕಾಲ ಬಾಕಿಯಿರುವ ನಿರ್ಭಯಾ ಪ್ರಕರಣವನ್ನು ಶೀಘ್ರದಲ್ಲಿಯೇ ಇತ್ಯರ್ಥ ಮಾಡಬೇಕಿದೆ ಎಂದು ಹೇಳಿತ್ತು. ಅಲ್ಲದೆ, ಮುಂದಿನ ವಿಚಾರಣೆಯನ್ನು ಜುಲೈ 18 ಕ್ಕೆ ಮುಂದೂಡಿತ್ತು.
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂಬಂಧಿಸಿದಂತೆ ಅಪರಾಧಿಗಳಿದೆ ದೆಹಲಿ ನ್ಯಾಯಾಲಯ ಮರಣ ದಂಡನೆಯನ್ನು ವಿಧಿಸಿದೆ. ಆದರೆ, ಶಿಕ್ಷೆ ಜಾರಿಗೆ ನ್ಯಾಯಾಲಯ ತಡೆ ನೀಡಿದ್ದು, 2014 ರಿಂದ ಪ್ರಕರಣ ಇತ್ಯರ್ಥವಾಗದೇ ಈಗಲೂ ಬಾಕಿ ಉಳಿದಿದೆ.
Comments are closed.