ರಾಷ್ಟ್ರೀಯ

ಮುಂಬೈ ದಾಳಿ: ಮತ್ತೊಂದು ಪಾಕ್ ಕುತಂತ್ರ ಬಹಿರಂಗ

Pinterest LinkedIn Tumblr

terror-attack-mumbaiನವದೆಹಲಿ: ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಪಟ್ಟಂತೆ ಆಘಾತಕಾರಿ ರಹಸ್ಯ ಬಹಿರಂಗಗೊಂಡಿದ್ದು, ಪಾಕಿಸ್ತಾನಕ್ಕೆ ಮಾತುಕತೆಗೆ ಹೋಗಿದ್ದ ಭಾರತದ ಗೃಹ ಸಚಿವಾಲಯ ಅಧಿಕಾರಿಗಳಿಗೆ ತಮ್ಮ ಪ್ರವಾಸವನ್ನು ಮುಂದುವರಿಸುವಂತೆ ಪಾಕಿಸ್ತಾನ ಮಾಡಿತು ಎಂದು ತಿಳಿದುಬಂದಿದೆ.
ಭಾರತದ ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳು ಪಾಕಿಸ್ತಾನಕ್ಕೆ ದ್ವಿಪಕ್ಷೀಯ ಮಾತುಕತೆಗೆಂದು ತೆರಳಿದ್ದರು. 2008 ನವೆಂಬರ್ 25ರಂದು ಭಾರತದ ಅಧಿಕಾರಿಗಳು ಪಾಕಿಸ್ತಾನದಲ್ಲಿದ್ದರು. ನವೆಂಬರ್ 26, 2008ರಂದು ಲಷ್ಕರ್ ಇ-ತೊಯ್ಬಾದ 10 ಮಂದಿ ಉಗ್ರಗಾಮಿಗಳು ಮುಂಬೈಯ ಪ್ರಮುಖ ತಾಣಗಳ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಭಾರತದ ಭದ್ರತಾ ಅಧಿಕಾರಿಗಳು ಇಸ್ಲಾಮಾಬಾದಿನ ಪರ್ವತ ಪ್ರದೇಶವಾದ ಮುರ್ರೆಯಲ್ಲಿ ರಜಾದ ಮಜಾ ಅನುಭವಿಸುತ್ತಿದ್ದರು.
ಮುಂಬೈಯಲ್ಲಿ ಭಯೋತ್ಪಾದಕ ದಾಳಿ ನಡೆದಾಗ 9 ಮಂದಿ ಭದ್ರತಾ ಅಧಿಕಾರಿಗಳು ಮುರ್ರೆಯ ನೋ ನೆಟ್ ವರ್ಕ್ ವಲಯದಲ್ಲಿದ್ದರು. ಭಾರತದ ಗೃಹ ಸಚಿವಾಲಯದ ಕೊಠಡಿ ಮುಂಬೈಯ ದಾಳಿ ನಡೆಯುತ್ತಿದ್ದಾಗ ಖಾಲಿಯಾಗಿತ್ತು. ಕಾರ್ಯಪ್ರವೃತ್ತವಾಗಲು ಅಲ್ಲಿ ಅಧಿಕಾರಿಗಳು ಇರಲಿಲ್ಲ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಭಾರತದೊಂದಿಗೆ ಮಾತುಕತೆ ಮುಂದುವರಿಸುವ ನೆಪದಲ್ಲಿ ಪಾಕಿಸ್ತಾನ ಐಎಸ್ಐ ಕುತಂತ್ರ ನಡೆಸಿ ಅಲ್ಲಿನ ಭಯೋತ್ಪಾದಕರು ತಮ್ಮ ಕೆಲಸ ಮುಗಿಸಿದ್ದರು.
ಅಂದು ಗೃಹ ಕಾರ್ಯದರ್ಶಿಯಾಗಿದ್ದ ಮಧುಕರ್ ಗುಪ್ತಾ ಮತ್ತು ಅವರ ತಂಡ ನವೆಂಬರ್ 24ರಂದು ಇಸ್ಲಾಮಾಬಾದಿಗೆ 8 ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆಗೆಂದು ಪಾಕ್ ಗೆ ತೆರಳಿತ್ತು. ನವೆಂಬರ್ 26ಕ್ಕೆ ಮಾತುಕತೆ ಮುಗಿಸಿ ಹಿಂತಿರುಗುವುದರಲ್ಲಿತ್ತು. ಆದರೆ ಪಾಕ್ ಸರ್ಕಾರ ಭಾರತದ ಗೃಹ ಅಧಿಕಾರಿಗಳ ಪ್ರವಾಸವನ್ನು ವಿಸ್ತರಿಸಿತ್ತು.
ಮುಂಬೈ ಮೇಲೆ ನವೆಂಬರ್ 26ರಂದು ಆರಂಭವಾಗಿದ್ದ ಉಗ್ರಗಾಮಿಗಳ ದಾಳಿ 29ರವರೆಗೆ 3 ದಿನಗಳ ಕಾಲ ಮುಂದುವರಿದು 164 ಮಂದಿ ಸಾವನ್ನಪ್ಪಿ, 308 ಮಂದಿ ಗಾಯಗೊಂಡಿದ್ದರು.

Comments are closed.