ಲೂದಿಯಾನ: ಫಿರೋಝ್ಪುರ್ನ ದಂಪತಿ ಅಪಹೃತಗೊಂಡಿದ್ದ ತಮ್ಮ ಮೂರು ವರ್ಷದ ಮಗುವನ್ನು ವಾಟ್ಸಪ್ ಮೂಲಕ ಮತ್ತೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಮಲ್ ಕುಮಾರ್ ಮತ್ತು ಸ್ವಪ್ನಾ ದಂಪತಿ ಫಿರೋಝ್ಪುರ್ನ ಸೀತನ್ ವಾಲಾ ಮಮ್ದೋದ್ ಹಳ್ಳಿಯ ನಿವಾಸಿಗಳಾಗಿದ್ದು, ಕಳೆದ ಮಂಗಳವಾರ ಸುವರ್ಣ ಮಂದಿರಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಜ್ಯೋತಿ ಎಂಬ ಹೆಸರಿನ ಮಹಿಳೆ ಪರಿಚಯವಾಗಿದೆ. ಆಕೆ ಒಳ್ಳೆಯವಳಂತೆ ಕಂಡಿದುದರಿಂದ, ಲಂಗರ್ನಲ್ಲಿ ತೆರಳುವಾಗ ಮಗುವನ್ನು ಆಕೆಯ ಬಳಿ ಬಿಟ್ಟು ಹೋಗಿದ್ದಾರೆ. ಆದರೆ ಬಂದು ನೋಡಿದಾಗ ಮಗು ಮತ್ತು ಮಹಿಳೆ ಇಬ್ಬರೂ ನಾಪತ್ತೆಯಾಗಿದ್ದರು.
ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಿಂದಾಗಿ ಮಹಿಳೆ ಚಿತ್ರ ಸೆರೆಯಾಗಿದೆ. ಪೋಷಕರು ಹಾಗೂ ಅಮೃತಸರ ಪೊಲೀಸರು ಮಗು ಮತ್ತು ಮಹಿಳೆಯ ಚಿತ್ರವನ್ನು ವಾಟ್ಸಪ್ ಮೂಲಕ ಎಲ್ಲರಿಗೂ ಕಳುಹಿಸಿದ್ದಾರೆ.
ಬುಧವಾರ ಬೆಳಗ್ಗೆ ಮಹಿಳೆ ಮಗುವಿನೊಂದಿಗೆ ಲೂಧಿಯಾನಕ್ಕೆ ರೈಲಿನ ಮೂಲಕ ತೆರಳುತ್ತಿದ್ದಾಗ, ಮೋಹಿಂದರ್ ಸಿಂಗ್ ಎಂಬಾತ ಮಹಿಳೆಯ ಗುರುತು ಪತ್ತೆ ಹಚ್ಚಿ, ಕೂಡಲೇ ವಾಟ್ಸಪ್ ಮೂಲಕ ಪೊಲೀಸರಿಗೆ ಸಂದೇಶ ರವಾನಿಸಿದ್ದಾನೆ.
ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ಲೂಧಿಯಾನ ರೈಲ್ವೇ ನಿಲ್ದಾಣದ ಗೇಟ್ ನಂ.೨ರಲ್ಲಿ ಬಂಧಿಸಿ, ಮಗುವನ್ನು ಪಾಲಕರ ವಶಕ್ಕೊಪ್ಪಿಸಿದ್ದಾರೆ. ಮಹಿಳೆ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Comments are closed.