
ನವದೆಹಲಿ: ಕೇಂದ್ರ ಸಚಿವೆ ಉಮಾಭಾರತಿ ಅವರ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ದೆಹಲಿ ಪೊಲೀಸ್ ಹೆಡ್ಕಾನ್ಸ್ಟೆಬಲ್ ಒಬ್ಬರು ಭಾನುವಾರ ತಡರಾತ್ರಿ ಇಲ್ಲಿನ ಅಕ್ಬರ್ ರಸ್ತೆಯಲ್ಲಿರುವ ಸಚಿವೆಯ ಅಧಿಕೃತ ನಿವಾಸದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗುಂಡು ಹಾರಿಸಿಕೊಂಡ ಮುಖ್ಯಪೇದೆ ಬೃಜ್ಪಾಲ್ನನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಪೇದೆಯ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಪೇದೆ ಬೃಜ್ಪಾಲ್ ಅವರ ಈ ನಿಗೂಢ ಸಾವಿಗೆ ಇನ್ನೂ ಕಾರಣಗಳು ತಿಳಿದುಬಂದಿಲ್ಲ ಎಂದು ಪೊಲೀಸ್ ಹೆಚ್ಚುವರಿ ಉಪ ಆಯುಕ್ತ ರೋಮಿಲ್ ಬನಿಯಾ ಹೇಳಿದ್ದಾರೆ. ತನ್ನದೇ ಅಧಿಕೃತ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡ ಬೃಜ್ಪಾಲ್ ತಕ್ಷಣ ಸೈರನ್ ಮೊಳಗಿಸಿದ್ದಾನೆ. ಇದನ್ನು ಕೇಳಿದ ಇತರ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ.