ತಮಿಳುನಾಡಿನ ಚಿದಂಬರಂನಲ್ಲಿರುವ ನಟರಾಜ ಮಂದಿರ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದು, ಸೃಷ್ಟಿಯ ಅದ್ಭುತ ತೀರ್ಥಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಈ ದೇವಾಲಯ ಹಲವು ರಹಸ್ಯಗಳನ್ನು ಒಡಲಲ್ಲಿಟ್ಟುಕೊಂಡಿದೆ. ಶಿವನು ಇಲ್ಲಿ ಪ್ರಣವ ಮಂತ್ರ “ಓಂ” ರೂಪದಲ್ಲಿ ನೆಲಸಿದ್ದಾನೆ ಎಂಬುದು ಭಕ್ತರ ನಂಬಿಕೆ.
ಕಾಳಹಸ್ತಿಯಲ್ಲಿರುವ ಈಶ್ವರನ ಕ್ಷೇತ್ರ ವಾಯು ಕ್ಷೇತ್ರ, ಕಾಂಚಿಯಲ್ಲಿರುವುದು ಪೃಥ್ವಿ ಕ್ಷೇತ್ರ, ತಿರುವಣ್ಣಾಮಲೈ ನಲ್ಲುರುವುದು ಅಗ್ನಿ ಕ್ಷೇತ್ರವಾದರೆ ತಿರುವನೈಕಾದಲ್ಲಿ ಜಲ ಕ್ಷೇತ್ರವಾದರೆ ಚಿದಂಬರಂ ಶಿವನ ಆಕಾಶ ಕ್ಷೇತ್ರವಾಗಿದೆ. ಈ ಆಕಾಶ ಕ್ಷೇತ್ರಕ್ಕೂ ವಿಜ್ಞಾನ ಕ್ಷೇತ್ರದ ಅಂತರಿಕ್ಷಕ್ಕೂ ಸಾಮ್ಯತೆಗಳಿದ್ದು ನಟರಾಜ ಮಂದಿರದ ಸ್ಥಳ ಪುರಾಣ ಚಿದಂಬರ ಕ್ಷೇತ್ರವನ್ನು ವಿಶ್ವದ ಕೇಂದ್ರವೆನ್ನುತ್ತದೆ ಭೂಗರ್ಭ ಶಾಸ್ತ್ರಜ್ಞ ಮತ್ತು ಭಾರತೀಯ ದರ್ಶನಗಳ ಬಗ್ಗೆ ಲೇಖನ ಬರೆದಿದ್ದ ಆನಂದ ಕುಮಾರಸ್ವಾಮಿ ಅವರ ಲೇಖನ. ಅಷ್ಟೇ ಅಲ್ಲದೇ ಭೌತ ವಿಜ್ಞಾನಿ ಫ್ರಿಟ್ಜೋ ಕಾಪ್ರಾ ಅವರ ತಾವೋ ಆಫ್ ಫಿಸಿಕ್ಸ್ ಎಂಬ ಕೃತಿಯಲ್ಲೂ ಚಿದಂಬರಂ ನ ನಟರಾಜನ ನೃತ್ಯದ ಬಗ್ಗೆಯೇ ಒಂದು ಅಧ್ಯಾಯ ಬರೆಯಲಾಗಿದ್ದು, ಭೌತ ಶಾಸ್ತ್ರಗಳಲ್ಲಿ ಬರುವ ಅಣುಗಳ ನರ್ತನಕ್ಕೂ ಚಿದಂಬರಂ ನ ನಟರಾಜನ ನರ್ತನಕ್ಕೂ ಸಾಮ್ಯತೆಯನ್ನು ಚಿತ್ರಿಸಲಾಗಿದೆ. ನಟರಾಜನ ವಿವಿಧ ನೃತ್ಯ ಪ್ರಕಾರಗಳಿದ್ದು ಚಿದಂಬರಂ ನ ನಲ್ಲಿರುವ ನಟರಾಜನದ್ದು ತಾಂಡವ ನೃತ್ಯ( ಅಥವಾ ನಾಶದ ಮುನ್ಸೂಚನೆ ನೀಡುವ ತಾಂಡವ ನರ್ತನ)
ಭೂಮಿಯ ಆಯಸ್ಕಾಂತೀಯ ಶಕ್ತಿಯ ಆಧಾರದ ಮೇಲೆ ಅಕ್ಷಾಂಶ – ರೇಖಾಂಶಗಳನ್ನು ಎಳೆದರೆ ಸಮಭಾಜಕ ರೇಖೆ ನಟರಾಜ ದೇವಾಲಯವಿರುವ ಚಿದಂಬರಂ ನ ಮೂಲಕ ಹಾಯುತ್ತದೆ ಎಂಬುದು ಮತ್ತೊಂದು ಅಚ್ಚರಿ. ಈ ಹಿನ್ನೆಲೆಯಲ್ಲಿ ಶಿವ ಈ ಸ್ಥಳವನ್ನು ಸೃಷ್ಟಿಯ ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡ, ಲಯ ಕಾರ್ಯಕ್ಕೂ ಇದನ್ನೇ ಕ್ಷೇತ್ರವಾಗಿ ಮಾಡಿಕೊಂಡ. ನಟರಾಜನ ನೃತ್ಯ ಸೃಷ್ಟಿ, ಸ್ಥಿತಿ, ಲಯ, ಸಾಕಾರ ಮತ್ತು ಮುಕ್ತಿ ಎಂಬ ಶಿವನ ಐದು ಚಟುವಟಿಕೆಗಳನ್ನು ದಾಖಲಿಸುತ್ತದೆ. ಎನ್ನುತ್ತಾರೆ ಆನಂದ ಕುಮಾರಸ್ವಾಮಿ. ನಟರಾಜನಿಗೆ ಸಂಬಂಧಪಟ್ಟ ಇಂಥದ್ದೇ ವಿವರಣೆಗಳನ್ನು ಸಿಇಆರ್ಎನ್ನ ಪ್ರಯೋಗಶಾಲೆಯ ಹೊರಗಿನ ಮೂರ್ತಿಯೆದುರಿಗೆ ಫಲಕದಲ್ಲಿ ದಾಖಲಿಸಲಾಗಿದೆ.
ನಾಲ್ಕು ಗೋಪುರಗಳು, ಪ್ರತಿಯೊಂದು ಕೂಡ ಒಂದು ನಿರ್ದಿಷ್ಟ ದಿಕ್ಕಿಗೆ ಅಭಿಮುಖವಾಗಿರುವ ಈ ದೇವಾಲಯ ನೋಡಲು ಅತ್ಯಾಕರ್ಷಕವಾಗಿದೆ. ಅದರ ಒಳಾಂಗಣದ ಶಿಲ್ಪ ಕಲಾ ವೈಭವವಂತೂ ಅತ್ಯದ್ಭುತ. ದೇವಾಲಯದ ಪ್ರತಿಯೊಂದು ಕಂಬಗಳು ಕೂಡ ಭರತನಾಟ್ಯದ ವಿವಿಧ ಭಾವ ಭಂಗಿಗಳನ್ನು ವ್ಯಕ್ತಪಡಿಸುವ ಶಿಲ್ಪಕಾರ್ಯವನ್ನು ಹೊಂದಿದ್ದು, ಇದೇ ಭಂಗಿಗಳ ಬಗ್ಗೆ ಭೌತ ವಿಜ್ಞಾನಿಗಳೂ ಅಧ್ಯಯನ ನಡೆಸಿದ್ದಾರೆ. ವಿಜ್ಞಾದ ಹೊರತಾಗಿ, ಧಾರ್ಮಿಕವಾಗಿ ನೋಡಿದರೂ ಇದು ಅಪರೂಪದ ದೇವಾಲಯ ಎನಿಸಿಕೊಳ್ಳುತ್ತದೆ. ಚಿದಂಬರಂ ಶ್ರೇಷ್ಠ ಶಿವ ಕ್ಷೇತ್ರಗಳಲ್ಲೊಂದಾಗಿದೆಯಾದರೂ, ಗೋವಿಂದರಾಜನ ಸನ್ನಿಧಿಯೂ ಇಲ್ಲಿದೆ. ಇಲ್ಲಿನ ವಿಶೇಷವೇನೆಂದರೆ, ಒಂದೇ ತಾಣದಲ್ಲಿರುವ ಶಿವ ಮತ್ತು ಗೋವಿಂದ ಇಬ್ಬರ ದರ್ಶನವನ್ನೂ ನೀವು ಪಡೆಯಬಹುದಾಗಿದೆ.