ಕೋಲ್ಕತ್ತಾ: ಗುಜರಾತ್ ಲಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಗೆಲುವಿನ ಹುಮ್ಮಸಿನಲ್ಲಿರುವ ರಾಯಲ್ ಚಾಲೆಂಡರ್ಸ್ ಬೆಂಗಳೂರು ತಂಡಕ್ಕೆ ಇಂದಿನ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.
ಇಂದು ಈಡನ್ ಗಾರ್ಡನ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ಸೋತರೆ ಮನೆಗೆ ಬರಲಿದ್ದು, ಗೆದ್ದರೆ ಅಲ್ಪ ಭರವಸೆ ಸಿಕ್ಕಂತಾಗುತ್ತದೆ. ಇನ್ನುಆರ್ಸಿಬಿ ಇಂದಿನ ಪಂದ್ಯ ಸೇರಿದಂತೆ ಮುಂದಿನ 3 ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಫ್ಲೇ ಆಫ್ ಕನಸು ಜೀವಂತವಾಗುಳಿಯಲಿದೆ.
ಆರ್ಸಿಬಿ ತಂಡದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರರೆಲ್ಲಾ ಇದ್ದು ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಆದರೆ ಕಳಪೆ ಬೌಲಿಂಗ್ ಪಡೆ ಹೊಂದಿರುವ ಆರ್ಸಿಬಿ ಬ್ಯಾಟಿಂಗ್ ಹೊಂದನ್ನೇ ನಂಬಿಕೊಳ್ಳಬೇಕಿದೆ. ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ. ಇನ್ನು ಆಲ್ ರೌಂಡರ್ ಶೇನ್ ವಾಟ್ಸನ್ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವಿದೆ. ಕನ್ನಡಿಗ ಕೆಎಲ್ ರಾಹುಲ್ ತಾಳ್ಮೆಯ ಆಟವಾಡುತ್ತಿದ್ದಾರೆ.
ಇನ್ನು ಕೆಕೆಆರ್ ಫ್ಲೇ ಆಫ್ ಕನಸು ಭದ್ರಪಡಿಸಿಕೊಂಡಿದ್ದು, ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆ ಹೊಂದಿದೆ. ನಾಯಕ ಗೌತಮ್ ಗಂಭೀರ್ ನಾಯಕತ್ವದಲ್ಲಿ ತಂಡ ಯಶಸ್ವಿಯಾಗಿ ಮುನ್ನಡೆಯುತ್ತಿದೆ.