ಚೆನ್ನೈ: ಶನಿವಾರದಂದು ತಮಿಳುನಾಡಿನಲ್ಲಿ ಚುನಾವಣಾ ಆಯೋಗ ಸೀಜ್ ಮಾಡಿದ 570 ಕೋಟಿ ರೂಗಳ ಭಾರೀ ಮೊತ್ತ ನಮ್ಮ ಬ್ಯಾಂಕಿಗೆ ಸೇರಿದ್ದು. ಅದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿ ಪಡೆದು ಸಾಗಿಸಲಾಗುತ್ತಿತ್ತು ಎಂದು ಎಸ್ಬಿಐ ಹೇಳಿದೆ.
ಆಂಧ್ರಪ್ರದೇಶದಲ್ಲಿ ತಾತ್ಕಾಲಿಕವಾದ ಹಣದ ಕೊರತೆಯುಂಟಾದ ಕಾರಣ 570 ಕೋಟಿ ರೂ.ಗಳನ್ನು ಕೊಯಂಬತ್ತೂರಿನ ಶಾಖೆಯಿಂದ ವಿಶಾಖಪಟ್ಟಣದ ಮತ್ತೊಂದು ಶಾಖೆಗೆ ಸಾಗಿಸಲಾಗುತ್ತಿತ್ತು. ಇದಕ್ಕೆ ಆರ್ಬಿಐ ನಿಂದ ಅನುಮತಿ ಪಡೆಯಲಾಗಿತ್ತು. ಚುನಾವಣಾ ಆಯೋಗ ಈ ಹಣವನ್ನು ವಶಪಡಿಸಿಕೊಂಡಿರುವುದು ತಪ್ಪು ಎಂದು ಎಸ್ಬಿಐ ಹೇಳಿಕೆ ನೀಡಿದೆ.
ಶನಿವಾರ ಆರ್ಬಿಐನ ನಿರ್ದೇಶನದಂತೆ ಆಂಧ್ರ ಪೊಲೀಸ್ ತಂಡದ ಬೆಂಗಾವಲಿನಲ್ಲೇ 3 ಟ್ರಕ್ಗಳಲ್ಲಿ ಹಣವನ್ನು ಸಾಗಿಲಾಗುತ್ತಿತ್ತು. ಆದರೆ ತಮಿಳುನಾಡಿನ ತಿರುಪ್ಪುರ ಜಿಲ್ಲೆಯಲ್ಲಿ ಟ್ರಕ್ಗಳನ್ನು ನಿಲ್ಲಿಸಿದ ಚುನಾವಣಾ ಆಯೋಗದ ಅಧಿಕಾರಿಗಳು ಟ್ರಕ್ನಲ್ಲಿದ್ದುದು ಎಸ್ಬಿಐನ ಹಣ ಎಂದು ಚಾಲಕ ಹೇಳಿದರೂ ಕೂಡ ಹಣವನ್ನು ವಶಪಡಿಸಿಕೊಂಡಿದ್ದರು.
ವಾಹನಗಳ ನಂಬರ್ ದಾಖಲೆಯಲ್ಲಿದ್ದ ಮಾಹಿತಿಗಿಂತ ಭಿನ್ನವಾಗಿದ್ದರಿಂದ ಅನುಮಾನ ಮೂಡಿ ತನಿಖೆಗಾಗಿ ವಾಹನಗಳನ್ನು ಸೀಜ್ ಮಾಡಲಾಯಿತು. ಸದ್ಯಕ್ಕೆ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಕೂಡಲೇ ವಾಹನಗಳನ್ನ ಬಿಡುಗಡೆ ಮಾಡಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೇಶ್ ಲಖೋನಿ ಸ್ಪಷ್ಟಪಡಿಸಿದ್ದಾರೆ.