ರಾಂಚಿ: ಜಾರ್ಖಂಡ್ನ ಛಾತ್ರ ಜಿಲ್ಲೆಯಲ್ಲಿ ಅಪರಿಚಿತ ಹಂತಕರು ಪತ್ರಕರ್ತರೊಬ್ಬರನ್ನು ಗುರುವಾರ ರಾತ್ರಿ ಗುಂಡು ಹಾರಿಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಮೋಟಾರ್ ಸೈಕಲ್ಗಳಲ್ಲಿ ಬಂದ ಹಂತಕರು ಛಾತ್ರದ ಪತ್ರಕರ್ತ ಇಂದ್ರದೇವ ಯಾದವ್ ಮೇಲೆ ಐದು ಸುತ್ತು ಗುಂಡು ಹಾರಿಸಿದ್ದು, ಯಾದವ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಯಾದವ್ ಮೇಲೆ ಈ ಗುಂಡಿನ ದಾಳಿ ನಡೆದಿದೆ. ಯಾದವ್ ಅವರು ಸ್ಥಳೀಯ ಟಿವಿ ವಾಹಿನಿಯೊಂದರ ಬಾತ್ಮೀದಾರರಾಗಿ ಸೇವೆ ಸಲ್ಲಿಸುತ್ತಿದ್ದರು.
ಜಾರ್ಖಂಡ್ ಪತ್ರಕರ್ತರ ಸಂಘ ಮತ್ತು ಜರ್ನಲಿಸ್ಟ್ ವಿಚಾರ್ ಮಂಚ್ ಹಾಗೂ ಇತರ ಮಾಧ್ಯಮ ಸಂಘಟನೆಗಳು ಘಟನೆಯನ್ನು ಖಂಡಿಸಿವೆ. ಹಂತಕರನ್ನು ತತ್ ಕ್ಷಣ ಬಂಧಿಸುವಂತೆ ಮತ್ತು ಯಾದವ್ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಜಾರ್ಖಂಡ್ ಪತ್ರಕರ್ತರ ಸಂಘ ಆಗ್ರಹಿಸಿದೆ.