ನವದೆಹಲಿ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ತಮ್ಮನ್ನು ನಿಂದಿಸಿಲ್ಲ ಎಂದು ತಂಡದ ಕೋಚ್ ಸಂಜಯ್ ಬಂಗಾರ್ ಅವರು ಹೇಳಿದ್ದಾರೆ.
ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ 1 ರನ್ ಗಳ ವಿರೋಚಿತ ಸೋಲು ಕಂಡ ಬಳಿಕ ತಂಡದ ಮಾಲಕಿ ಪ್ರೀತಿ ಜಿಂಟಾ ಕೋಚ್ ಸಂಜಯ್ ಬಂಗಾರ್ ಗೆ ನಿಂದಿಸಿದ್ದರು. ಅಲ್ಲದೆ ತಂಡದ ಕೋಚ್ ಸ್ಥಾನದಿಂದ ಕಿತ್ತೆಸೆಯುವುದಾಗಿ ಹೇಳಿದ್ದರು ಎಂಬು ಸುದ್ದಿಗಳ ಹಿನ್ನಲೆಯಲ್ಲಿ ಇಂದು ಸ್ವತಃ ಸ್ಪಷ್ಟನೆ ನೀಡಿರುವ ಸಂಜಯ್ ಬಂಗಾರ್ ತಮ್ಮನ್ನು ಯಾರೂ ನಿಂದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಮೇ 9ರಂದು ಆರ್ ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ 1 ರನ್ ಗಳ ಸೋಲು ಕಂಡಿತ್ತು. ಸೋಲಿನ ಬಳಿಕ ನಾವು ಸಾಮಾನ್ಯದಂತೆಯೇ ಸೋಲಿನ ಕುರಿತು ಪರಾಮರ್ಶೆ ನಡೆಸಿದ್ದವು ಅಷ್ಟೇ. ಅದನ್ನೇ ಮಾಧ್ಯಮಗಳು ತಪ್ಪಾಗಿ ಬಾವಿಸಿ ಇಲ್ಲಸಲ್ಲದ ಸುದ್ದಿಗಳನ್ನು ಪ್ರಕಟಿಸುತ್ತಿವೆ. ಪ್ರೀತಿ ಜಿಂಟಾ ತಮ್ಮನ್ನು ನಿಂಧಿಸಿಲ್ಲ. ಗೆಲುವಿನ ಸಮೀಪಕ್ಕೆ ಬಂದು 1 ರನ್ ಅಂತರದಲ್ಲಿ ಸೋತಿದ್ದು ನಿಜಕ್ಕೂ ನೋವಾಗಿದೆ. ಆದರೆ ಹಾಗಂತ ಯಾರೂ ತಮ್ಮನ್ನು ನಿಂದಿಸಿಲ್ಲ. ಅವಾಚ್ಯ ಪದಗಳ ಬಳಕೆ ಮಾಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಮಾಧ್ಯಮಗಳ ವರದಿಯನ್ನು ತಳ್ಳಹಾಕಿರುವ ನಟಿ ಪ್ರೀತಿ ಜಿಂಟಾ ಕೂಡ, ನಾನು ಸಂಜಯ್ ಬಂಗಾರ್ ರನ್ನು ನಿಂದಿಸಿಲ್ಲ. ಅವರ ವಿರುದ್ಧ ಯಾವುದೇ ರೀತಿಯ ಅವಾಚ್ಯ ಪದಗಳ ಬಳಕೆ ಮಾಡಿಲ್ಲ. ತಂಡದ ಕೋಚ್ ಆಗಿ ಮತ್ತು ಓರ್ವ ಸ್ನೇಹಿತನಾಗಿ ಬಂಗಾರ್ ನನಗೆ ತುಂಬಾ ಆಪ್ತರಾಗಿದ್ದಾರೆ. ಆದರೆ ಇತ್ತೀಚಿನ ಕೆಲ ಮಾಧ್ಯಮಗಳ ವರದಿಯಿಂದ ತಾವು ಬೆಸತ್ತಿದ್ದು, ಕೆಲ ಪತ್ರಕರ್ತರು ಕೆಲ ಸೆಲೆಬ್ರಿಟಿಗಳನ್ನು ಕೇಂದ್ರವಾಗಿಸಿಕೊಳ್ಳುತ್ತಿದ್ದಾರೆ ಎಂದು ಪ್ರೀತಿ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆಯೂ ಕೂಡ ಪ್ರೀತಿ, ಸಂಜಯ್ ಬಂಗಾರ್ ರನ್ನು ನಿಂಧಿಸಿದ ಕುರಿತು ವರದಿ ಪ್ರಕಟವಾಗುತ್ತಿದ್ದಂತೆಯೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.