ನವದೆಹಲಿ(ಪಿಟಿಐ): ಕಾಂಗ್ರೆಸ್ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಹಾಕಿದ ಪತ್ರ ಬಂದ ಬೆನ್ನಲ್ಲೆ, ಪಕ್ಷದ ಮುಖಂಡರು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಸೊಮವಾರ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆಯೊಡ್ಡಿ ತಮಿಳು ಭಾಷೆಯಲ್ಲಿ ಬರೆದಿರುವ ಪತ್ರವನ್ನು ಮೇ 4ರಂದು ಪುದುಚೆರಿಯಿಂದ ಕಳುಹಿಸಲಾಗಿದೆ. ರಾಹುಲ್ ಗಾಂಧಿ ಅವರು ಪುದುಚೆರಿಯ ಕಾರೈಕಲ್ನಲ್ಲಿ ಮೇ 10ರಂದು(ಮಂಗಳವಾರ) ಪಕ್ಷದ ಚುನಾವಣಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಸೇರಿದಂತೆ, ಖಜಾಂಚಿ ಮೋತಿಲಾಲ್ ವೋರಾ, ಪಕ್ಷದ ರಾಜ್ಯಸಭೆ ಉಪ ನಾಯಕ ಆನಂದ ಶರ್ಮ, ರಾಜ್ಯಸಭೆ ಸದಸ್ಯ ರಾಜೀವ್ ಶುಕ್ಲ ಅವರನ್ನೊಳಗೊಂಡ ತಂಡ ರಾಜನಾಥ್ ಅವರನ್ನು ಭೇಟಿ, ರಾಹುಲ್ ಅವರಿಗೆ ಜೀವ ಬೆದರಿಕೆ ಬಂದಿರುವ ಬಗ್ಗೆ ತಿಳಿಸಿದೆ. ಹೆಚ್ಚಿನ ಭದ್ರತೆ ಒದಗಿಸುವಂತೆ ಮನವಿ ಮಾಡಿದೆ. ಈ ಕುರಿತು 20 ನಿಮಿಷ ಅವರ ಜತೆ ಚರ್ಚೆ ನಡೆಸಿದೆ.
ಮನವಿಗೆ ಪೂರಕವಾಗಿ ಹೆಚ್ಚಿನ ಭದ್ರತೆ ಒದಗಿಸುವ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ವಿಶೇಷ ರಕ್ಷಣಾ ದಳ (ಎಸ್ಪಿಜಿ) ಎಚ್ಚರಿಕೆ ವಹಿಸುವಂತೆ ಸಿಂಗ್ ಅವರು ತಿಳಿಸಿದ್ದಾಗಿ ಶರ್ಮ ಅವರು ಹೇಳಿದರು.
ಗೃಹ ಸಚಿವಾಲಯ, ರಾಹುಲ್ಗೆ ಬಂದಿರುವ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಗೃಹ ಕಾರ್ಯದರ್ಶಿ ರಾಜೀವ್ ಮಿಶ್ರಾ ಅವರಿಗೆ ಸೂಚನೆ ನೀಡಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ