ರಸ್ತೆಗಳಲ್ಲಿ ತ್ರಿಡಿ ಚಿತ್ರಕಲೆಯ ಕಲಾ ಚಿತ್ತಾರ ಹೆಚ್ಚಾಗುತ್ತಲೇ ಇದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ನಮ್ಮ ಬೆಂಗಳೂರಿನ ರಸ್ತೆ ಮಧ್ಯದಲ್ಲಿ ದೈತ್ಯ ಅನಕೊಂಡ ಮತ್ತು ಮೊಸಳೆ ಪ್ರತ್ಯಕ್ಷಗೊಂಡಿರುವುದು ಭಾರಿ ಸುದ್ದಿಗೆ ಗ್ರಾಸವಾಗಿತ್ತು.
ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಗುಜರಾತ್ ನಲ್ಲಿ ತ್ರಿಡಿ ರಸ್ತೆ ಕಲೆಗಾರಿಕೆಯು ಹುಟ್ಟಿಕೊಂಡಿದೆ. ಇಲ್ಲಿ ಇಬ್ಬರು ಮಹಿಳೆಯರು ಜೊತೆ ಸೇರಿ ತ್ರಿಡಿ ಕಲೆ ರಚಿಸಿರುವುದು ಗಮನಾರ್ಹ.
ಕಣ್ಣಿಗೆ ಮುದವನ್ನು ನೀಡುವ ತ್ರಿಡಿ ಕಲೆಗಾರಿಕೆಯನ್ನು ನೋಡುವುದೇ ಚೆಂದ. ಈಗ ಅಹಮದಾಬಾದ್ ನ ಕಲಾವಿದೆ ಸೌಮ್ಯ ಪಾಂಡ್ಯ ಥಕ್ಕರ್ ಮತ್ತು ಶಂಕುತಲಾ ಪಾಂಡ್ಯ ನಾವೀನ್ಯ ತ್ರಿಡಿ ತಂತ್ರಗಾರಿಕೆಯನ್ನು ರಚಿಸಿದ್ದಾರೆ.
ಭಾರತೀಯ ಚಾಲಕರ ಮನೋಸ್ಥಿತಿ ಹೇಗಿದೆಯೆಂದರೆ ರಸ್ತೆ ಅಡ್ಡವಾಗಿ ಸ್ಪೀಡ್ ಬ್ರೇಕರ್ ಇದ್ದರೆ ಮಾತ್ರ ಬ್ರೇಕ್ ಅದುಮುವ ಸಾಹಸಕ್ಕೆ ಮುಂದಾಗುತ್ತಾರೆ. ಅತಿ ವೇಗದಿಂದಾಗಿ ಇಂದು ಸಾಕಷ್ಟು ಅಪಘಡಗಳು ಸೃಷ್ಟಿಯಾಗುತ್ತಿದೆ.
ಈಗ ವಾಹನ ಸವಾರರ ಮತ್ತು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಆದ್ಯತೆ ಕೊಟ್ಟಿರುವ ಈ ಇಬ್ಬರು ಮಹಿಳೆಯರು ತ್ರಿಡಿ ಕೌಶಲ್ಯದ ಝಿಬ್ರಾ ಕ್ರಾಸಿಂಗ್ ಮುಂತಾದ ಕಲೆಗಳನ್ನು ರಚಿಸಿದ್ದಾರೆ.
ಇದನ್ನು ಪರಿಶೀಲಿಸಿರುವ ಅಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇವುಗಳು ಹೆದ್ದಾರಿ ನಿಯಮದಡಿಯ ಪರಿಧಿಗೆ ಒಳಪಡುವುದರಿಂದ ಸೀಮಿತ ವಿನ್ಯಾಸವನ್ನಷ್ಟೇ ನಡೆಸಲು ಸಾಧ್ಯವಾಗಿದೆ.
ಸಹಜವಾಗಿಯೇ ಮುಂದುಗಡೆ ಅಡೆ ತಡೆಯಂತಿರುವ ಈ ತ್ರಿಡಿ ಕಲೆಯಿಂದಾಗಿ ವಾಹನ ಸವಾರರು ನಿಧಾನವಾಗಿ ಚಲಿಸುತ್ತಾರೆ. ಪ್ರಮುಖವಾಗಿಯೂ ಶಾಲೆ ಮತ್ತು ಅಪಘಾತ ಸ್ಥಳಗಳಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.
ಚೀನಾದಲ್ಲಿ ಇದಕ್ಕೆ ಸಮಾನವಾದ ತ್ರಿಡಿ ಚಿತ್ರ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡ ಇವರು ಭಾರತದಲ್ಲಿ ಇದಕ್ಕೆ ಸಮಾನವಾದ ತ್ರಿಡಿ ಕಲೆಯನ್ನು ಹುಟ್ಟು ಹಾಕಿದ್ದಾರೆ.