ನವದೆಹಲಿ: ಅಗಸ್ತಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಾತನಾಡುವಾಗ ಉಲ್ಲೇಖಿಸಿದ ದಾಖಲೆಗಳನ್ನು ಪ್ರಮಾಣೀಕರಿಸುವಂತೆ ಸುಬ್ರಮಣಿಯನ್ ಸ್ವಾಮಿ ಅವರಿಗೆ ಸೂಚಿಸಲಾಗಿದೆ.
ಪ್ರಮಾಣೀಕರಿಸಲು ವಿಫಲರಾದಲ್ಲಿ ಅಗಸ್ತಾ ಕುರಿತ ಚರ್ಚೆಯಲ್ಲಿ ಅವರು ಮಾಡಿದ ಪ್ರಸ್ತಾಪಗಳನ್ನು ದಾಖಲೆಗಳಿಂದ ಕಿತ್ತು ಹಾಕಲಾಗುವುದು ಎಂದು ಮೂಲಗಳು ಹೇಳಿವೆ.
ಕಳೆದ ವಾರವಷ್ಟೇ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸ್ವಾಮಿ ಅವರು ಹೆಲಿಕಾಪ್ಟರ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ನಡೆದ ಈ ಹೆಲಿಕಾಪ್ಟರ್ ಖರೀದಿಯಲ್ಲಿ ಅಗಸ್ತಾ ವೆಸ್ಟ್ಲ್ಯಾಂಡ್ ಕಂಪೆನಿಯಿಂದ ಲಂಚ ಪಾವತಿಯಾಗಿದೆ ಎಂಬ ಆರೋಪವಿದ್ದು, ಇಟಲಿಯ ಕೋರ್ಟ್ ಇತ್ತೀಚೆಗೆ ತನ್ನ ತೀರ್ಪಿನಲ್ಲಿ ಈ ಭ್ರಷ್ಟಾಚಾರ ಪ್ರಕರಣವನ್ನು ದೃಢಪಡಿಸಿತ್ತು.
ಸ್ವಾಮಿ ಅವರು ಸದನದಲ್ಲಿ ಉದ್ದೇಶಪೂರ್ವಕವಾಗಿ ತಿರುಚಿದ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿದೆ.