ರಾಯ್ಪುರ (ಛತ್ತೀಸ್ಗಢ): ಖಾಸಗಿ ಬಸ್ ಹಳ್ಳಕ್ಕೆ ಉರುಳಿದ ಪರಿಣಾಮ 16 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟು, 53 ಮಂದಿ ಗಾಯಗೊಂಡಿದ್ದಾರೆ.
ಜಾರ್ಖಂಡ್ ರಾಜ್ಯದ ಗಢ್ವಾದಿಂದ ರಾಜಧಾನಿ ರಾಯ್ಪುರಕ್ಕೆ ಬರುತ್ತಿದ್ದ ಲಕ್ಸುರಿ ಬಸ್ ಧಲದೋವಾ ಘಾಟ್ ಸಮೀಪ ಬುಧವಾರ ರಾತ್ರಿ 10.30 ರ ಸುಮಾರಿಗೆ ಈ ಅವಗಢ ಸಂಭವಿಸಿದೆ. ಬಸ್ಸನ್ನು ಹಿಂದಿಕ್ಕುವ ಸಲುವಾಗಿ ವೇಗವಾಗಿ ಬಂದ ಬೈಕ್ ಚಾಲಕನನ್ನು ಅಪಘಾತದಿಂದ ಉಳಿಸಲು ಯತ್ನಿಸಿದ ಬಸ್ ಚಾಲಕ ಸ್ಟೇರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡ. ಇದರ ಪರಿಣಾಮ ನೀರಿಲ್ಲದ ಹಳ್ಳಕ್ಕೆ ಬಸ್ ಉರುಳಿತು. ತಲೆಕೆಳಕಾಗಿ ಬಸ್ ಬಿದ್ದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿದೆ ಎಂದು ಬಲರಾಂಪುರ್ ಜಿಲ್ಲಾ ಪೊಲೀಸ್ ವರಿಷ್ಠ ಸದಾನಂದಕುಮಾರ್ ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಸುದ್ದಿ ತಿಳಿದ ತಕ್ಷಣ ಪೊಲೀಸರ ತಂಡ ತುರ್ತು ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದು, ಗಾಯಾಳುಗಳನ್ನು ಅಂಬಿಕಾಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ನೆರವಾಯಿತು. ಮೃತರೆಲ್ಲರೂ ಪುರುಷರಾಗಿದ್ದು, ಚಹರೆ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾತ್ರಿ ವೇಳೆ ಅಪಘಾತ ಸಂಭವಿಸಿದ ಕಾರಣ ಪ್ರಯಾಣಿಕರ ಜೀವ ರಕ್ಷಣಾ ಕಾರ್ಯ ಪೊಲೀಸ್ ಸಿಬ್ಬಂದಿಗೆ ಸವಾಲಾಗಿತ್ತು ಎಂದವರು ಹೇಳಿದ್ದಾರೆ.
ಮುಖ್ಯಮಂತ್ರಿ ಸಂತಾಪ:
ಮುಖ್ಯಮಂತ್ರಿ ರಾಮನ್ಸಿಂಗ್ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರಕಿಸಿಕೊಡಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.