ಕಾಕಿನಾಡಾ: ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ ಜಾಲಕ್ಕೆ ಅತಿ ದೊಡ್ಡದಾದ ತಿಮಿಂಗಿಲ ಬಿದ್ದಿದೆ. ಭ್ರಷ್ಟ ಉಪ ಸಾರಿಗೆ ಆಯುಕ್ತನ ನಿವಾಸದ ಮೇಲೆ ದಾಳಿ ನಡೆಸಿದಾಗ ಬರೋಬ್ಬರಿ 800 ಕೋಟಿ ರೂಪಾಯಿಗಳ ಆಸ್ತಿ ಪತ್ತೆಯಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆರೋಪಿ ಅಧಿಕಾರಿ ಎ.ಮೋಹನ್ ಎಂಬಾತನ ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ಆತನ ಭ್ರಷ್ಟ ಸಾಮ್ರಾಜ್ಯವನ್ನು ಕಂಡು ದಂಗಾಗಿದ್ದಾರೆ.
ಕೇಂದ್ರ ತನಿಖಾ ದಳದ ಡಿಎಸ್ಪಿ ಎ.ರಮಾದೇವಿ ನೇತೃತ್ವದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಮೋಹನ್ ಆಸ್ತಿಯ ದಾಖಲೆಗಳ ಪ್ರಕಾರ 100 ರಿಂದ 120 ಕೋಟಿ ರೂಪಾಯಿಗಳ ಮೌಲ್ಯವನ್ನು ಹೊಂದಿದೆ. ಇಂದಿನ ಮಾರುಕಟ್ಟೆಯ ಮೌಲ್ಯ ಅಂದಾಜು 800 ಕೋಟಿ ರೂಪಾಯಿಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಅಧಿಕಾರಿಗಳ ಪ್ರಕಾರ, ಆರೋಪಿ ಮೋಹನ್ ಬ್ಯಾಂಕ್ ಲಾಕರ್ಗಳನ್ನು ಇನ್ನೂ ತೆಗೆಯಲಾಗಿಲ್ಲ. ಆತನನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.
ಮೋಹನ್ ಮತ್ತು ಆತನ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ಮಾಡಿದಾಗ ವಜ್ರ, ವೈಢೂರ್ಯ ಸೇರಿದಂತೆ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ.
ಭಷ್ಟ್ರ ಅಧಿಕಾರಿ ಮೋಹನ್ಗೆ ಸಂಬಂಧಿಸಿದ ಆಸ್ತಿಗಳ ಹುಡುಕಾಟಕ್ಕಾಗಿ ವಿಜಯವಾಡಾ, ಅನಂತ್ ಪುರ್, ಕಡಪಾ, ಬಳ್ಳಾರಿ, ನೆಲ್ಲೂರು, ಪ್ರಕಾಶಂ ಮತ್ತು ಹೈದ್ರಾಬಾದ್ನ ಕೆಲ ಪ್ರದೇಶಗಳಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.