ಮುಂಬೈ: 2006ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರೆತೆಯುಂಟಾದ ಕಾರಣ ಎಲ್ಲಾ 9 ಮುಸ್ಲಿಂ ಆರೋಪಿಗಳನ್ನು ಮುಂಬೈ ನ್ಯಾಯಾಲಯ ಸೋಮವಾರ ದೋಷಮುಕ್ತಗೊಳಿಸಿ, ಬಿಡುಗಡೆಗೆ ಆದೇಶ ನೀಡಿದೆ.
2006ರಲ್ಲಿ ಮಾಲೆಗಾಂವ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 37 ಮಂದಿ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯವು ಇದೀಗ ಪ್ರಕರಣವನ್ನು ಕೈಬಿಟ್ಟಿದ್ದು, ಯುವಕರನ್ನು ದೋಷಾರೋಪದಿಂದ ಮುಕ್ತಗೊಳಿಸಿ ಜಸ್ಟೀಸ್ ವಿವಿ ಪಾಟೀಲ್ ತೀರ್ಪು ನೀಡಿದರು.
ಈ ಪ್ರಕರಣದ ಬಗ್ಗೆ ಮೊದಲು ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸಿ ನಿಷೇಧಿತ ಸಿಮಿ ಉಗ್ರಗಾಮಿ ಸಂಘಟನೆಗೆ ಸೇರಿದ್ದ ನೂರುಲ್ ಹುದಾ, ಶಬ್ಬೀರ್ ಅಹ್ಮದ್, ರಾಯೀಸ್ ಅಹ್ಮದ್, ಸಲ್ಮಾನ್ ಫಾರ್ಸಿ, ಫೋರೋಘ್ ಮಗ್ದುಮಿ, ಶೇಖ್ ಮೊಹಮ್ಮದ್ ಅಲಿ, ಆಸಿಫ್ ಖಾನ್, ಮೊಹಮ್ಮದ್ ಝಹೀದ್ ಹಾಗೂ ಅಬ್ರಾರ್ ಅಹ್ಮದ್ ಎಂಬುವವರನ್ನು ಬಂಧಿತ್ತು. ಅಲ್ಲದೆ, ಈ ಸಂಘಟನೆ ಪಾಕ್ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ನೆರವಿನ ಮೂಲಕ ಸ್ಫೋಟ ಕೃತ್ಯಗಳನ್ನು ಎಸಗಿತ್ತು ಎಂದು ತನಿಖಾ ದಳ ಹೇಳಿತ್ತು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಮತ್ತು ಎಟಿಎಸ್ ಜಂಟಿಯಾಗಿ ತನಿಖೆ ನಡೆಸಿದ್ದವು.
ನಂತರ ಇವರಲ್ಲಿ 6 ಮಂದಿ 2011ರ ನವೆಂಬರ್ ತಿಂಗಳಿನಲ್ಲಿ ಜಾಮೀನು ಪಡೆದುಕೊಂಡಿದ್ದರು. ಒಬ್ಬ ಆರೋಪಿ ಸಾವನ್ನಪ್ಪಿದ್ದ, ಇಬ್ಬರು ಆರೋಪಿಗಳು ದೋಷಿಯಾಗಿದ್ದರು.
ಪ್ರಕರಣ ಸಂಬಂಧ ಕಳೆದ ವಾರವಷ್ಟೇ ರಾಷ್ಟ್ರೀಯ ತನಿಖಾ ದಳ, 2006ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಈ 9 ಮಂದಿ ಮುಸ್ಲಿಂ ಯುವಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಳಿಲ್ಲ ಎಂದು ಮುಂಬೈ ಕೋರ್ಟ್ ಗೆ ತಿಳಿಸಿತ್ತು. ಇದರಿಂದಾಗಿ ಎಲ್ಲಾ ಆರೋಪಿಗಳು ದೋಷಮುಕ್ತರಾಗಲು ಹಾದಿ ಸುಲಭ ದಾರಿ ಸಿಕ್ಕಂತಾಗಿತ್ತು.