ನವದೆಹಲಿ, ಏ. ೨೩- ಹಿಂದೂ ಭಯೋತ್ಪಾದನಾ ಪ್ರಕರಣಗಳನ್ನು ಬಲಹೀನಗೊಳಿಸಿ ಮುಚ್ಚಿ ಹಾಕುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಮುಖ್ಯಸ್ಥನನ್ನು ತೆಗೆದು ಹಾಕಿ, ಸುಪ್ರೀಂಕೋರ್ಟ್ ನೇರವಾಗಿಯೇ ಪ್ರಕರಣಗಳ ತನಿಖಾ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಹಿಂದೂ ಭಯೋತ್ಪಾದನಾ ಪ್ರಕರಣಗಳ ತನಿಖೆ ನಡೆಸಿ ರಾಷ್ಟ್ರೀಯ ತನಿಖಾ ದಳದ ಮೇಲೆ ಪ್ರಧಾನಿ ನರೇಂದ್ರಮೋದಿ ಸರ್ಕಾರ ಒತ್ತಡ ಹೇರಿ ಪ್ರಕರಣಗಳನ್ನು ಬಲಹೀನಗೊಳಿಸುತ್ತಿದೆ ಎಂದು ದೂರಿರುವ ಕಾಂಗ್ರೆಸ್ ವಕ್ತಾರ ಅಜಯ್ ಕುಮಾರ್ ವಿಭಜನೆ ರಾಜಕೀಯದ ಮೂಲಕ ಕೇಂದ್ರ ಸರ್ಕಾರ ಎನ್.ಐ.ವಿ ಘನತೆಗೆ ಕುಂದು ತರುತ್ತಿದೆ ಎಂದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದೂ ಭಯೋತ್ಪಾದನಾ ಪ್ರಕರಣಗಳಾದ ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ, ಅಜ್ಮೀರ್ ಸ್ಫೋಟ ಮತ್ತು ಮಾಲೇಗಾಂವ್ ಸ್ಫೋಟ ಪ್ರಕರಣಗಳ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದಾರೆ ಎಂದು ಅವರು ಆರೋಪಿಸಿದರು.
ಕೇಂದ್ರ ಸರ್ಕಾರ ಹಿಂದೂ ಭಯೋತ್ಪಾದನಾ ಪ್ರಕರಣದ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ನಡೆಸಿದೆ ಎಂದು ಅವರು ದೂರಿದರು.
ಹಿಂದೂ ಭಯೋತ್ಪಾದನೆ ಕಾಂಗ್ರೆಸ್ ಸೃಷ್ಟಿ
ಕಾಂಗ್ರೆಸ್ ಪಕ್ಷ ಮುಸ್ಲಿಂರನ್ನು ಓಲೈಸಲು `ಹಿಂದೂ ಭಯೋತ್ಪಾದಕ’ ಪದವನ್ನು ಹುಟ್ಟಿ ಹಾಕಿತು ಎಂದು ಬಿಜೆಪಿ ದೂರಿದೆ.
ಹಿಂದುತ್ವ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ನಡೆದ ತನಿಖೆಗಳನ್ನು ಕಾಂಗ್ರೆಸ್ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬರುತ್ತಿದ್ದಂತೆ ಬಿಜೆಪಿ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿ ಮುಸ್ಲಿಂರನ್ನು ಓಲೈಸಲು ಹಿಂದೂ ಭಯೋತ್ಪಾದಕತೆಯನ್ನು ಹುಟ್ಟು ಹಾಕಿದೆ ಎಂದು ಆರೋಪಿಸಿದೆ.
ಹಿಂದೂ ಭಯೋತ್ಪಾದಕ ಹೆಸರಿನಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ರಾಜಕಾರಣದ ಆಟ ಆಡುತ್ತಿದೆ ಎಂದು ಬಿಜೆಪಿ ಹೇಳಿದೆ.
ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಡೇವಿಡ್ ಹೆಡ್ಲಿ ಮಾಲೇಗಾಂವ್ ಸ್ಫೋಟ ಪ್ರಕರಣ ಹಾಗೂ ಇಸ್ರತ್ ಜಾನ್ ಪ್ರಕರಣಗಳನ್ನು ಹಿಂದೂ ಭಯೋತ್ಪಾದನೆಗೆ ತಳುಕು ಹಾಕಿದ್ದರ ಸಂಚಿನ ಸತ್ಯ ಹೊರ ಹಾಕುತ್ತಿದ್ದಂತೆ ಬಿಜೆಪಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿ ಕಾಂಗ್ರೆಸ್ ಅಲ್ಪಸಂಖ್ಯಾತರ ಮತ ಪಡೆಯುವ ದುರುದ್ದೇಶದಿಂದ ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸಿತು ಎಂದು ಟೀಕಿಸಿದೆ.
ಪ್ರಕರಣಗಳ ಬಗ್ಗೆ ತನಿಖೆ ಪೂರ್ಣಗೊಳ್ಳುವ ಮೊದಲೇ ನ್ಯಾಯಾಲಯದಿಂದ ಸರಿಯಾದ ತೀರ್ಪುಗಳು ಹೊರ ಬೀಳುವ ಮುನ್ನವೇ ಕಾಂಗ್ರೆಸ್ನ ದೊಡ್ಡ ದೊಡ್ಡ ನಾಯಕರು ಹಿಂದೂ ಭಯೋತ್ಪಾದನೆಯಂತಹ ಪದ ಸೃಷ್ಟಿಸಿದರು ಎಂದು ಬಿಜೆಪಿ ದೂರಿದೆ.
ರಾಷ್ಟ್ರೀಯ