ನವದೆಹಲಿ (ಪಿಟಿಐ): ಉತ್ತರಾಖಂಡ ರಾಜಕೀಯ ಬಿಕ್ಕಟ್ಟನ್ನು ಪ್ರಸ್ತಾಪಿಸಿ ಸಂಸತ್ತಿನಲ್ಲಿ ಸರ್ಕಾರವನ್ನು ಹಣಿಯಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ.
ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನ ಸೋಮವಾರದಿಂದ(ಏಪ್ರಿಲ್ 25) ಪುನಾರಂಭಗೊಳ್ಳಲಿದ್ದು, ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲು ಕಾಂಗ್ರೆಸ್ ಸಜ್ಜಾಗಿದೆ.
ಬಿಕ್ಕಟ್ಟಿನ ಕುರಿತು ಚರ್ಚೆ ಹಾಗೂ ನಿಲುವಳಿ ಮಂಡಿಸಲು ಕಾಂಗ್ರೆಸ್ ಮುಖಂಡರಾದ ಗುಲಾಂ ನಬೀ ಆಜಾದ್ ಹಾಗೂ ಆನಂದ್ ಶರ್ಮಾ ಅವರು ಈಗಾಗಲೇ ರಾಜ್ಯಸಭೆಯಲ್ಲಿ ನೋಟಿಸ್ಗಳನ್ನು ನೀಡಿದ್ದಾರೆ.
ನಿಯಮ 267ರ ಅಡಿಯಲ್ಲಿ ನೋಟಿಸ್ ನೀಡಿರುವ ಆನಂದ್ ಶರ್ಮಾ, ‘ಉತ್ತರಾಖಂಡ ಸರ್ಕಾರ ಅಸ್ಥಿರಗೊಳಿಸಿದ ಹಾಗೂ ರಾಷ್ಟ್ರಪತಿ ಆಳ್ವಿಕೆ ವಿಧಿಸಿರುವ’ ಮೋದಿ ಸರ್ಕಾರದ ವಿರುದ್ಧ ಖಂಡಿಸಿ ನಿರ್ಣಯ ಕೈಗೊಳ್ಳುವಂತೆ ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಅವರಿಗೆ ಕೋರಿದ್ದಾರೆ.