ಕೋಲ್ಕತ್ತಾ, ಏ.21- ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆ ಚುನಾವಣೆಯ ಮೂರನೆ ಹಂತದ ಮತದಾನ ಇಂದು ನಡೆದಿದ್ದು, ಚುನಾವಣಾ ಸಂಬಂಧಿ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮೂರನೆ ಹಂತದಲ್ಲಿ ಕೋಲ್ಕತ್ತಾ ನಗರದ ಏಳು ಕ್ಷೇತ್ರಗಳೂ ಸೇರಿದಂತೆ ಒಟ್ಟು 62 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಿತು. ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಗಲಭೆಯ ವೇಳೆ ಬಾಂಬ್ ಸ್ಫೋಟಿಸಿ ಇಬ್ಬರು ಸಾವನ್ನಪ್ಪಿ ಕೆಲವರು ಗಾಯಗೊಂಡಿದ್ದಾರೆ. ಒಟ್ಟು ಏಳು ಹಂತದ ಮತದಾನ ಪ್ರಕ್ರಿಯೆಯಲ್ಲಿ ಇಂದು ಮೂರನೆ ಹಂತ ಮುಕ್ತಾಯಗೊಂಡಿದ್ದು, ಇನ್ನು ನಾಲ್ಕು ಹಂತಗಳು ಬಾಕಿ ಇವೆ.
ಕೊನೆಯ ಹಂತ ಮೇ 5ಕ್ಕೆ ನಡೆಯಲಿದ್ದು, ಮೇ 19ರಂದು ಮತ ಎಣಿಕೆ ನಡೆಯಲಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಹಾಗೂ ಎಡಪಕ್ಷಗಳು, ಕಾಂಗ್ರೆಸ್ ಮೈತ್ರಿಕೂಟದ ನಡುವೆ ಭಾರೀ ಜಿದ್ದಾಜಿದ್ದಿ ನಡೆದಿದೆ. ಇನ್ನು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಖಾತೆ ತೆರೆಯಲು ಹರಸಾಹಸ ನಡೆಸಿದೆ.