ನೈನಿತಾಲ್, ಉತ್ತರಾಖಂಡ (ಪಿಟಿಐ): ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡದಲ್ಲಿ ಕೇಂದ್ರ ಸರ್ಕಾರ ವಿಧಿಸಿದ್ದ ರಾಷ್ಟ್ರಪತಿ ಆಳ್ವಿಕೆ ರದ್ದುಪಡಿಸಿರುವ ಉತ್ತರಾಖಂಡ ಹೈಕೋರ್ಟ್, ಏಪ್ರಿಲ್ 29ರಂದು ಹೊಸದಾಗಿ ಬಹುಮತ ಸಾಬೀತು ಪಡಿಸುವಂತೆ ಗುರುವಾರ ಸೂಚಿಸಿದೆ.
ಈ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹಾಗೂ ನ್ಯಾಯಮೂರ್ತಿ ವಿ.ಕೆ.ಬಿಸ್ಟ್ ಅವರಿದ್ದ ಪೀಠ ಸತತ ನಾಲ್ಕನೇ ದಿನವೂ ಮುಂದುವರೆಸಿತು.
ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂಥ ಪರಿಸ್ಥಿತಿ ಇಲ್ಲದಿದ್ದರೂ ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ಅದನ್ನು ಜಾರಿಗೊಳಿಸಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ವಿಚಾರಣೆಯುದ್ದಕ್ಕೂ ಕೇಂದ್ರ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.
ಅಲ್ಲದೇ, ‘ಪ್ರತಿ ರಾಜ್ಯಗಳಲ್ಲೂ ಇದನ್ನೇ ಮಾಡಿ. 10–15 ದಿನ ರಾಷ್ಟ್ರಪತಿ ಆಳ್ವಿಕೆ ಹೇರಿ. ಬಳಿಕ ಮತ್ತೊಬ್ಬರಿಗೆ ಸರ್ಕಾರ ರಚಿಸಲು ಹೇಳಿ. ಭಾರತ ಸರ್ಕಾರವೇ ಹೀಗೆ ವರ್ತಿಸಿದರೆ, ನಮಗೆ ಕೋಪಕ್ಕಿಂತ ಹೆಚ್ಚಾಗಿ ನೋವಾಗುತ್ತದೆ’ ಎಂದು ಕಿಡಿಕಾರಿತು.
ರಾಷ್ಟ್ರೀಯ