ಡೆಹ್ರಾಡೂನ್ : ಕಳೆದ ತಿಂಗಳು ಬಿಜೆಪಿ ಪ್ರತಿಭಟನೆ ವೇಳೆ ಗಾಯಗೊಂಡು ಕೃತಕ ಕಾಲು ಅಳವಡಿಸಲಾಗಿದ್ದ ಪೊಲೀಸ್ ಕುದುರೆ ‘ಶಕ್ತಿಮಾನ್’ ಗುರುವಾರ ಕೊನೆಯುಸಿರೆಳೆದಿದೆ.
‘ಮಾರ್ಚ್ 14ರಂದು ಗಾಯಗೊಂಡಿದ್ದ ‘ಶಕ್ತಿಮಾನ್’ಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ಕೃತಕ ಕಾಲನ್ನೂ ಅಳವಡಿಸಲಾಗಿತ್ತು. ಆದರೆ ಅವನು ಸೋಂಕಿನಿಂದಾಗಿ ಗುಣಮುಖನಾಗಲಿಲ್ಲ’ ಎಂದು ಡೆಹ್ರಾಡೂನ್ನ ಎಸ್ಎಸ್ಪಿ ಸದಾನಂದ ದಾತೆ ತಿಳಿಸಿದ್ದಾರೆ.
‘ಸಂಜೆ 5.30ಕ್ಕೆ ಕುದುರೆ ಸಾವನ್ನ ಪ್ಪಿತು. ವೈದ್ಯಕೀಯ ಸಂಬಂಧಿ ಸಮಸ್ಯೆ ಗಳಿಂದ ಆತ ಬಳಲುತ್ತಿದ್ದ. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ನಿಖರ ಕಾರಣ ತಿಳಿದುಬರಲಿದೆ’ ಎಂದು ಪೊಲೀಸ್ ಮಹಾ ನಿರೀಕ್ಷಕ ಗರ್ವಾಲ್ ಸಂಜತ್ ಗುಂಜ್ಯಾಲ್ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಬಂಧನಕ್ಕೆ ಮೇನಕಾ ಆಗ್ರಹ (ನವದೆಹಲಿ ವರದಿ) ಶಕ್ತಿಮಾನ್ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಹಾಗೂ ಕುದುರೆಗಳನ್ನು ಪೊಲೀಸ್ ಪಡೆಗಳಲ್ಲಿ ಬಳಸಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವೆ ಹಾಗೂ ಪ್ರಾಣಿಗಳ ಹಕ್ಕು ಕಾರ್ಯಕರ್ತೆ ಮೇನಕಾ ಗಾಂಧಿ ಬುಧವಾರ ಇಲ್ಲಿ ಆಗ್ರಹಿಸಿದ್ದಾರೆ.