ನವದೆಹಲಿ: ಪನಾಮ ಪೇಪರ್ ಲೀಕ್ಸ್ನಲ್ಲಿ ಹೆಸರು ಬಹಿರಂಗವಾಗಿದ್ದ 50 ಭಾರತೀಯರಿಗೆ ಕೇಂದ್ರ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿ ವಿವರಣೆ ಕೇಳಿದೆ. ಪಟ್ಟಿಯಲ್ಲಿರುವ 50 ಪ್ರಮುಖರಿಗೆ ನೋಟೀಸ್ ಕಳುಹಿಸಿರುವ ಅಧಿಕಾರಿಗಳು ಮೂರು ದಿನದ ಒಳಗಾಗಿ ಉತ್ತರಿಸುವಂತೆ ನಿರ್ದೇಶನ ನೀಡಿದ್ದಾರೆ.
ನೋಟಿಸ್ನಲ್ಲಿ ಪ್ರಮುಖವಾಗಿ ಎರಡು ಪ್ರಶ್ನೆಗಳನ್ನು ಕೇಳಲಾಗಿದ್ದು, ಒಂದು ಪಟ್ಟಿಯಲ್ಲಿರುವ ಹೆಸರಿನ ಸತ್ಯಾಸತ್ಯತೆ ಬಗ್ಗೆ ವಿವರಣೆ ಕೊಡಿ. ಮತ್ತೊಂದು ವಿದೇಶಗಳಲ್ಲಿ ಅಡಗಿಸಿಟ್ಟಿರುವ ಸಂಪತ್ತಿನ ಸಂಪುರ್ಣ ವಿವರಣೆ ತಿಳಿಸಿ ಎಂದು ನೊಟೀಸ್ ಜಾರಿಮಾಡಿದ್ದಾರೆ.
ಈ ಪಟ್ಟಿಯಲ್ಲಿ ಕರ್ನಾಟಕದ ಹಾಲಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅಳಿಯ ಸೇರಿ ಮೂವರು ಕನ್ನಡಿಗರ ಹೆಸರಿದೆ. ಜೊತೆಗೆ ಬಾಲಿವುಡ್ನ ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ಸೈಫ್ ಅಲಿಖಾನ್ ಸೇರಿದಂತೆ ಹಲವು ಖ್ಯಾತನಾಮರಿದ್ದು, ಇವರೆಲ್ಲರೂ ತನಿಖೆಗೆ ಒಳಗಾಗುವ ಸಾಧ್ಯತೆ ಇದೆ.