ನವದೆಹಲಿ (ಪಿಟಿಐ): ಉಕ್ರೇನ್ನ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ಇರಿದು ಕೊಲೆ ಮಾಡಲಾಗಿದೆ.
ಇರಿತಕ್ಕೊಳಗಾದ ಮತ್ತೊಬ್ಬ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಜಫರ್ನಗರದ ಪ್ರಣವ್ ಶಾಂಡಿಲ್ಯ ಮತ್ತು ಗಾಜಿಯಾಬಾದ್ನ ಅಂಕುರ್ ಸಿಂಗ್ ಮೃತಪಟ್ಟವರು. ಆಗ್ರಾದ ಇಂದ್ರಜಿತ್ ಸಿಂಗ್ ಚೌಹಾಣ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಮೂರು ಮಂದಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಉಕ್ರೇನ್ನ ಮೂರು ಮಂದಿ ಸ್ಥಳೀಯ ಕಿಡಿಗೇಡಿಗಳು ಹಲ್ಲೆ ನಡೆಸಿ ಮಾರಕಾಸ್ತ್ರಗಳಿಂದ ಇರಿದಿದ್ದಾರೆ.
‘ಉಕ್ರೇನ್ ಉಜ್ಗೊರೊಡ್ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ಮೂರು ಮಂದಿ ವಿದ್ಯಾರ್ಥಿಗಳ ಮೇಲೆ ಭಾನುವಾರ ದಾಳಿ ನಡೆದಿದೆ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಪ್ರಣವ್ ಶಾಂಡಿಲ್ಯ ಮೂರನೇ ವರ್ಷ ಮತ್ತು ಅಂಕುರ್ ಸಿಂಗ್ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರು.
‘ಇಂದ್ರಜಿತ್ ಸಿಂಗ್ ಚೌಹಾಣ್ ನೀಡಿರುವ ಮಾಹಿತಿಯ ಆಧಾರದ ಮೇಲೆ ಉಕ್ರೇನ್ ಗಡಿ ದಾಟಲು ಯತ್ನಿಸುತ್ತಿದ್ದ ಮೂರು ಮಂದಿ ಉಕ್ರೇನ್ ಪ್ರಜೆಗಳನ್ನು ವಶಕ್ಕೆ ತೆಗೆದುಕೊಂಡಿರುವ ಸ್ಥಳೀಯ ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದಾರೆ’ ಎಂದು ಸ್ವರೂಪ್ ತಿಳಿಸಿದ್ದಾರೆ.
ಮೃತರ ಕುಟುಂಬ ಸದಸ್ಯರ ಜತೆಗೆ ಮಾತನಾಡಲಾಗಿದೆ. ಶವಗಳನ್ನು ಭಾರತಕ್ಕೆ ತರಲು ಪ್ರಯತ್ನ ನಡೆದಿದೆ. ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸ್ವರೂಪ್ ಹೇಳಿದ್ದಾರೆ.
ರಾಷ್ಟ್ರೀಯ