ನವದೆಹಲಿ (ಪಿಟಿಐ): ಆಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಭಾರತದ ಉತ್ತರ ಮತ್ತು ಪಶ್ಚಿಮ ಭಾಗದ ಹಲವೆಡೆ ಭಾನುವಾರ ಭೂಕಂಪವಾಗಿದೆ.
ಆಫ್ಘಾನಿಸ್ತಾನದ ಹಿಂದೂಕುಷ್ ಪರ್ವತ ಶ್ರೇಣಿ ಭೂಕಂಪದ ಕೇಂದ್ರ ಎಂದು ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರ (ಎನ್ಸಿಎಸ್) ತಿಳಿಸಿದೆ. ರಿಕ್ಟರ್ ಮಾಪನದಲ್ಲಿ 6.8ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ.
‘ಹಿಂದೂಕುಷ್ ಪರ್ವತ ಶ್ರೇಣಿಯ 190 ಕಿ.ಮೀ ನೆಲದಾಳದ ಕೇಂದ್ರ ಬಿಂದುವಿನಿಂದ ಭಾನುವಾರ ಮಧ್ಯಾಹ್ನ 3.58ಕ್ಕೆ ಭೂಮಿ ಕಂಪಿಸಿದೆ’ ಎಂದು ಎನ್ಸಿಎಸ್ನ ಹಿರಿಯ ಭೂವಿಜ್ಞಾನಿ ಜೆ.ಎಲ್. ಗೌತಮ್ ತಿಳಿಸಿದ್ದಾರೆ.
ಭಾರತದ ಜಮ್ಮು– ಕಾಶ್ಮೀರ, ಪಂಜಾಬ್, ಚಂಡೀಗಡ, ಹರಿಯಾಣ ಮತ್ತು ದೆಹಲಿಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಕಂಪದಿಂದಾಗಿ ದೆಹಲಿ ಮೆಟ್ರೊ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭೂಕಂಪದಿಂದಾಗಿ ಪ್ರಾಣ ಹಾನಿ ಹಾಗೂ ಆಸ್ತಿ ಹಾನಿ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ರಾಷ್ಟ್ರೀಯ