ಭಯೋತ್ಪಾದನೆ ನಡುವೆಯೂ ಪಾಕ್ ತನಿಖಾ ತಂಡಕ್ಕೆ ಎನ್ಐಎ ಯಿಂದ ಬಿರ್ಯಾನಿ ಔತಣ! ಭಯೋತ್ಪಾದನೆ ನಡುವೆಯೂ ಪಾಕ್ ತನಿಖಾ ತಂಡಕ್ಕೆ ಎನ್ಐಎ ಯಿಂದ ಬಿರ್ಯಾನಿ ಔತಣ!
ನವದೆಹಲಿ: ಪಠಾಣ್ ಕೋಟ್ ವಾಯು ನೆಲೆ ಮೇಲೆ ಪಾಕ್ ಭಯೋತ್ಪಾದಕರ ದಾಳಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿದ್ದ ಪಾಕ್ ತನಿಖಾ ತಂಡಕ್ಕೆ ಎನ್ಐಎ ಬಿರ್ಯಾನಿ ಸೇರಿದಂತೆ ಭೂರಿ ಭೋಜನದ ಔತಣ ನೀಡಿರುವುದು ಬಹಿರಂಗವಾಗಿದೆ.
ಪಾಕಿಸ್ತಾನದ ತನಿಖಾ ತಂಡ ಕೇಳಿದ ಪ್ರತಿಬಾರಿಯೂ, ದೆಹಲಿ ಕರೀಮ್ಸ್ ನ ಜಹಂಗೀರಿ ಕುರ್ಮಾ, ತಂದೂರಿ ಬುರ್ರ, ರೋಘ್ನಿ ನಾನ್, ಖಮೀರಿ ರೋಟಿ, ಲಕ್ಷ್ಮಿ ನಗರ್ ನ ಹೀರಾ ಸ್ವೀಟ್ಸ್ ನಿಂದ ಸಿಹಿ ತಿನಿಸುಗಳ ಅದ್ಧೂರಿ ಔತಣ ನೀಡಲಾಗಿದೆ. ದೆಹಲಿಗೆ ಆಗಮಿಸಿದ ಮೊದಲ ದಿನ ಪಾಕ್ ತನಿಖಾ ತಂಡಕ್ಕೆ ಐಟಿಸಿ ಮೌರ್ಯ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನ ಪಾಕ್ ತನಿಖಾ ತಂಡದ ಸದಸ್ಯರು ತಂದೂರಿ ಚಿಕನ್, ದಾಲ್ ಬುಖಾರ ಸೇರಿದಂತೆ ವಿವಿಧ ರೀತಿಯ ಉತ್ತರ ಭಾರತ ಶೈಲಿಯ ಭೋಜನ ಸೇವಿಸಿದ್ದಾರೆ.
ಎರಡನೇ ದಿನ ಎನ್ಐಎ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಪಾಕ್ ತನಿಖಾ ತಂಡವನ್ನು ಮಧ್ಯಾಹ್ನದ ಊಟಕ್ಕಾಗಿ ಶಂಗ್ರಿ ಲಾ ಹೋಟೆಲ್ ಗೆ ಕರೆದೊಯ್ಯಲಾಗಿದ್ದು, ಪಾಕ್ ತನಿಖಾ ತಂಡ ತಂದೂರಿ ಹಾಗೂ ಮಟನ್ ಖಾದ್ಯಗಳನ್ನು ಸವಿದಿದೆ. ಇನ್ನು ಮೂರನೇ ದಿನ ಕರೀಮ್ಸ್ ರೆಸ್ಟೋರೆಂಟ್ ನಿಂದ ತರಿಸಲಾಗಿದ್ದ ಖಾದ್ಯಗಳನ್ನು ನೀಡಲಾಗಿದೆ ಎಂದು ಹಿರಿಯ ಎನ್ಐಎ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಂಡೇ ಸ್ಟಾಂಡರ್ಡ್ ಗೆ ತಿಳಿಸಿದ್ದಾರೆ.