ನವದೆಹಲಿ: ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮದ್ಯದೊರೆ ವಿಜಯ್ ಮಲ್ಯ ಮತ್ತೆ ವಿಚಾರಣೆಗೆ ಗೈರಾಗಿದ್ದು, ಮೇ ತಿಂಗಳ ಅಂತ್ಯದವರೆಗೂ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಹಿಂದೆ ಜಾರಿ ನಿರ್ದೇಶನಾಲಯ ಇಂದು ವಿಚಾರಣೆಗೆ ಹಾಜರಾಗುವಂತೆ ಮಲ್ಯಗೆ ನೋಟಿಸ್ ನೀಡಿತ್ತು. ಆದರೆ ಅವರ ಪರ ವಕೀಲರ ಮೂಲಕ ಉತ್ತರಿಸಿರುವ ಮಲ್ಯ ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ತಮಗೆ ಮೇ ತಿಂಗಳ ಅಂತ್ಯದವರೆಗೂ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದಿದ್ದ ಮಲ್ಯ ವಿಚಾರಣೆಯನ್ನು ಮಾರ್ಚ್ 18ರಿಂದ ಏಪ್ರಿಲ್ 2ಕ್ಕೆ ಮುಂದೂಡುವಂತೆ ಕೋರಿದ್ದರು. ಇದೀಗ ಮತ್ತೆ ವೈಯುಕ್ತಿಕ ಕಾರಣಗಳ ನೆಪವೊಡ್ಡಿ ವಿಚಾರಣೆಯನ್ನು ಮುಂದೂಡಲು ಪ್ರಯತ್ನಿಸುತ್ತಿದ್ದಾರೆ.
ತನಿಖಾಧಿಕಾರಿಗಳು ಕೂಡ ಈ ಹಿಂದೆ ತಾಂತ್ರಿಕ ಮತ್ತು ಕಾನುನೂ ಲೋಪದೋಷಗಳ ನೆಪವೊಡ್ಡಿ ಮಲ್ಯ ವಿಚಾರಣೆಯನ್ನು ಮುಂದೂಡಿದ್ದರು. ಇದೀಗ ಮತ್ತೆ ವಿಜಯ್ ಮಲ್ಯ ಬೇರೆ ಕಾರಣಗಳನ್ನು ನೀಡಿ ವಿಚಾರಣೆಗೆ ಗೈರಾಗಿದ್ದಾರೆ. ಹೀಗಾಗಿ ಅಧಿಕಾರಿಗಳು ಮಲ್ಯ ವಿರುದ್ಧ ಯಾವ ರೀತ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.