ನವದೆಹಲಿ: ಯೆಮನ್ ನಲ್ಲಿ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾದ ಫಾದರ್ ಟಾಮ್ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿರುವ ಫಾದರ್ ಟಾಮ್ ಸುರಕ್ಷಿತವಾಗಿದ್ದಾರೆಂದು ಸಿಬಿಸಿಐ ತಂಡಕ್ಕೆ ಸ್ಪಷ್ಟ ಪಡಿಸಿದ್ದಾರೆ. ಗುಡ್ ಫ್ರೈಡೆ ದಿನದಂದು ಫಾದರ್ ಟಾಮ್ ಅವರನ್ನು ಇಸಿಸ್ ಉಗ್ರರು ನೇಣು ಹಾಕಿದ್ದಾರೆನ್ನುವುದು ವದಂತಿ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಸಂತಸವಾಗಿದೆ ಎಂದು ಸಿಬಿಸಿಐ ಉಪ ಪ್ರಧಾನ ಕಾರ್ಯದರ್ಶಿ ಮಾನ್ಸಿಗ್ನೋರ್ ಜೋಸೆಫ್ ಚಿನ್ನಿಯಾನ್ ತಿಳಿಸಿದ್ದಾರೆ.
ಫಾದರ್ ಟಾಮ್ ಅಪಹರಣಕ್ಕೊಳಗಾಗಿ ಒಂದು ತಿಂಗಳಾಯಿತು. ಫಾದರ್ ಟಾಮ್ ಅವರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳ ಮಾಡುತ್ತಿರುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಚಿನ್ನಿಯಾನ್ ಹೇಳಿದ್ದಾರೆ.
ಟಾಮ್ ಅವರು ಯೆಮನ್ ನ ಮದರ್ ತೆರೆಸಾ ಮಿಷನರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೆಮನ್ ನಲ್ಲಿ ಮಾರ್ಚ್ 4ರಂದು ವೃದ್ಧಾಶ್ರಮದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ 16 ಮಂದಿಯನ್ನು ಹತ್ಯೆಗೈಯ್ಯಲಾಗಿತ್ತು. ಈ ವೇಳೆ ಫಾದರ್ ಟಾಮ್ ಉಳುನ್ನಲಿಲ್ ಅವರನ್ನು ನಾಲ್ವರು ಬಂದೂಕುದಾರಿಗಳು ಅಪಹರಿಸಿದ್ದರು. ಆ ಬಂದೂಕುಧಾರಿಗಳು ಇಸಿಸ್ ಉಗ್ರ ಸಂಘಟನೆಗೆ ಸೇರಿದವರು ಎಂದು ಹೇಳಲಾಗುತ್ತಿದೆ. ಗುಡ್ ಫ್ರೈಡೆ ದಿನದಂದು ಫಾದರ್ ಟಾಮ್ ಅವರನ್ನು ಗಲ್ಲಿಗೇರಿಸಲಾಗಿದೆ ಎಂದು ಸುದ್ದಿ ಕೇಳಿ ಬಂದಿತ್ತು. ಆದರೆ, ಇದೊಂದು ವದಂತಿ ಎಂದು ಕೇಂದ್ರ ಸರ್ಕಾರ ಸ್ಪಷ್ಟನೇ ನೀಡಿದೆ.