ರಾಂಚಿ, ಏ.2- ತನ್ನ ಅಸಹನೆ ಹೇಳಿಕೊಳ್ಳಲು ಸಾಧ್ಯವಿಲ್ಲದಂತಹ ಮೂಗ ಮತ್ತು ಕಿವುಡ ವ್ಯಕ್ತಿಯೊಬ್ಬನ ಶಿರಚ್ಛೇದನ ಮಾಡುವ ತೀರ್ಮಾನ ಕೈಗೊಳ್ಳುವ ಮೂಲಕ ಜಾರ್ಖಂಡ್ನ ಪಶ್ಚಿಮ ಸಿಂಗಂ ಗ್ರಾಮದ ಪಂಚಾಯ್ತಿ ಸದಸ್ಯರು 21ನೆ ಶತಮಾನದಲ್ಲೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಗೆ ಸಾಕ್ಷಿಯಾಗಿದ್ದಾರೆ. ಪಂಚಾಯ್ತಿ ತೀರ್ಮಾನದಂತೆ ಶಿರಚ್ಛೇದನಕ್ಕೊಳಗಾದ ವಿಕಲಚೇತನನನ್ನು ಸುಖ್ಲಾಲ್ ಅಕಾ ಗುಂಗಾ (20) ಎಂದು ಗುರುತಿಸಲಾಗಿದೆ.
ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಈ ಘಟನೆ ನಡೆದು 10 ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದ್ದು , ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಪಶ್ಚಿಮ ಸಿಂಗಂ ಗ್ರಾಮದ ಸುಖ್ಲಾಲ್ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ದೊಡ್ಡಪ್ಪ ದುರ್ಗಾ ಲೋಹರ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು.ಈ ಪ್ರಕರಣ ಪಂಚಾಯ್ತಿ ಮೆಟ್ಟಿಲೇರಿತ್ತು. ಪಂಚಾಯ್ತಿಯಲ್ಲಿ ಸುಖ್ಲಾಲ್ ಮೂಕನಾಗಿದ್ದರಿಂದ ತನ್ನ ಸಂಕಷ್ಟ ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆತನದೇ ತಪ್ಪು ಎಂಬ ತೀರ್ಮಾನಕ್ಕೆ ಪಂಚಾಯ್ತಿ ಸದಸ್ಯರು ಬಂದಿದ್ದರು.
ತಕ್ಷಣ ಸುಖ್ಲಾಲ್ನ ತಂದೆಯನ್ನು ಮರಕ್ಕೆ ಕಟ್ಟಿ ಹಾಕಿ ಆತನನ್ನು ಕಾಡಿಗೆ ಕರೆದೊಯ್ದು ತಲೆ ಕಡಿದು ಪೊದೆಯಲ್ಲಿ ಬಿಸಾಡಿ ದೇಹವನ್ನು ಸುಟ್ಟು ಹಾಕಲಾಗಿದೆ. ಪಂಚಾಯ್ತಿಗೆ ಹೆದರಿ ಗ್ರಾಮಸ್ಥರ್ಯಾ ರೂ ಈ ಕುರಿತಂತೆ ತುಟಿ ಬಿಚ್ಚಿರಲಿಲ್ಲ. ಆದರೆ ಪ್ರಕರಣ ಕುರಿತಂತೆ ಪೊಲೀಸರಿಗೆ ಬಂದ ಅನಾಮಧೇಯ ಪತ್ರ ಇಡೀ ಪ್ರಕರಣವನ್ನು ಬಿಚ್ಚಿಟ್ಟಿದೆ. ನಮಗೆ ಬಂದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಪೊದೆಯಲ್ಲಿ ಬಿಸಾಡಲಾಗಿದ್ದ ಸುಖ್ಲಾಲ್ನ ತಲೆಯನ್ನು ವಶಪಡಿಸಿಕೊಳ್ಳಲಾಗಿದೆ. ಪಂಚಾಯ್ತಿ ತೀರ್ಮಾನದಂತೆ ಶಿರಚ್ಛೇದನ ಮಾಡಿದ ವ್ಯಕ್ತಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದು , ಶೀಘ್ರ ಆರೋಪಿಗಳನ್ನು ಬಂಧಿಸುವುದಾಗಿ ಮುಫಾಸಿಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ದಿಗ್ವಿಜಯ ಸಿಂಗ್ ತಿಳಿಸಿದ್ದಾರೆ.